ಪುತ್ತೂರು: ಇತಿಹಾಸ ಪ್ರಸಿದ್ಧ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ಟೆಂಪಲ್ ದೇವಾಲಯದ ರಾಜಾಂಗಣದಲ್ಲಿ ಇರುವ ಐದು ಕಟ್ಟೆಗಳ ಪುನರ್ನಿರ್ಮಾಣ ಕಾಮಗಾರಿಗಳ ಪೈಕಿ ‘ಕದಿರು ವಿನಿಯೋಗದ ಕಟ್ಟೆ’ ಪುನರ್ನಿರ್ಮಾಣಕ್ಕೆ ಬೆಂಗಳೂರಿನ ಉದ್ಯಮಿ ಅತ್ತಾಳ ನಾಗೇಶ್ ರಾವ್ ಅವರು ರೂ. 25 ಲಕ್ಷ ಸಮರ್ಪಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಾಲಯದ ವತಿಯಿಂದ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.


ಇತ್ತೀಚೆಗೆ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ಕಟ್ಟೆಗಳ ಪುನರ್ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಆ ಸಂದರ್ಭದಲ್ಲಿ ಅನ್ಯ ಕಾರ್ಯಕ್ರಮದ ನಿಮಿತ್ತವಾಗಿ ಹಾಜರಾಗಲು ಸಾಧ್ಯವಾಗದ ನಾಗೇಶ್ ರಾವ್ ಅವರು ಬಳಿಕ ಬೆಳಿಗ್ಗೆ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.



ದೇವಾಲಯದ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಶಲ್ಯ ಹೊದಿಸಿ ನಾಗೇಶ್ ರಾವ್ ಅವರನ್ನು ಸನ್ಮಾನಿಸಿದರು. ಪ್ರಧಾನ ಅರ್ಚಕ ವೇ.ಮೂ. ವಸಂತ ಕೆದಿಲಾಯ ಅವರು ವಿಶೇಷ ಪ್ರಾರ್ಥನೆ ನೆರವೇರಿಸಿದರು.
ನಂತರ ಪುನರ್ನಿರ್ಮಾಣಗೊಳ್ಳಲಿರುವ ಕಟ್ಟೆಯ ಮುಂಭಾಗದಲ್ಲಿ ಅತ್ತಾಳ ನಾಗೇಶ್ ರಾವ್ ಹಾಗೂ ಅವರ ಪತ್ನಿ ಸುಜಾತಾ ದಂಪತಿಗಳಿಂದ ಸಂಕಲ್ಪ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅತ್ತಾಳ ಕುಟುಂಬದವರು ಹಾಗೂ ದೇವಾಲಯದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.



