ನವದೆಹಲಿ: ಅಯ್ಯಯ್ಯೋ ವಿಮಾನ ಪ್ರಯಾಣಿಕರ ಸಮಸ್ಯೆ ಕೇಳೋರು ಯಾರು? ಕಳೆದ ಕೆಲವು ದಿನಗಳಿಂದ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯ ಅಂದರೆ ಅದು ವಿಮಾನ ರದ್ದು. ಅದರಲ್ಲೂ ಭಾರತೀಯ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ ವಿಮಾನಗಳು ಭಾರೀ ಸುದ್ದಿಯಲ್ಲಿದೆ.
ಒಂದೇ ದಿನ ಬೆಂಗಳೂರು ಸೇರಿ ದೇಶದ ಹಲವೆಡೆ ಇಂಡಿಗೋ 550ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. ಇಂಡಿಗೋ ಆರಂಭವಾಗಿ 20 ವರ್ಷವಾದರೂ, ಅದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ರದ್ದಾಗಿದೆ.




ಸತತ ಮೂರನೇ ದಿನವೂ ಕಾರ್ಯಾಚರಣೆಯ ಅಡೆತಡೆಗಳು ಇಂಡಿಗೋ ಏರ್ಲೈನ್ನಲ್ಲಿ ಮುಂದುವರಿದಿದ್ದು, ಪೈಲಟ್ ನಿಯೋಜನೆಯಲ್ಲಿ ಸಮಸ್ಯೆಗಳು ಮತ್ತು ತಾಂತ್ರಿಕ ಅಡಚಣೆಗಳು ಸೇರಿದಂತೆ ಹಲವು ಅಂಶಗಳು ಇದಕ್ಕೆ ಪ್ರಮುಖ ಕಾರಣವಾಗಿದೆ.
ಕಾರ್ಯಾಚರಣೆಗಳನ್ನು ಸಹಜ ಸ್ಥಿತಿಗೆ ತರಲು ಇಂಡಿಗೋ ತನ್ನ ತನ್ನ ಪ್ರಯಾಣದ ವೇಳಾಪಟ್ಟಿಗಳನ್ನು ಅಪ್ಡೇಟ್ ಮಾಡಿದೆ. ಮುಂಬರುವ ಎರಡು-ಮೂರು ದಿನಗಳಲ್ಲೂ ಮತ್ತಷ್ಟು ವಿಮಾನಗಳು ರದ್ದಾಗಬಹುದು ಎಂದು ವಿಮಾನಯಾನ ಸಂಸ್ಥೆ ಜನರಿಗೆ ಸೂಚನೆ ನೀಡಿದೆ. ಪ್ರತಿದಿನ 2,300 ವಿಮಾನಗಳನ್ನು ನಿರ್ವಹಿಸುವ ಇಂಡಿಗೋ, ಸಮಯಪಾಲನೆಗೆ ಹೆಸರುವಾಸಿಯಾಗಿತ್ತು.
ಈ ಗಂಭೀರ ಪರಿಸ್ಥಿತಿಯ ಕುರಿತು ಪರಿಶೀಲಿಸಲು, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಿಮಾನಯಾನ ನಿಯಂತ್ರಕ ಡಿಜಿಸಿಎ ಅಧಿಕಾರಿಗಳು ಗುರುವಾರ ಇಂಡಿಗೋ ಸಂಸ್ಥೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಹಾರಕ್ಕಾಗಿ ಚರ್ಚೆ ನಡೆಸಿದ್ದಾರೆ. “ಕಾರ್ಯಾಚರಣೆಗಳನ್ನು ಸಹಜ ಸ್ಥಿತಿಗೆ ತರುವುದು ಮತ್ತು ಸಮಯಪಾಲನೆಯನ್ನು ಮರಳಿ ತರುವುದು ಸುಲಭದ ಗುರಿಯಲ್ಲ” ಎಂದು ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ತಮ್ಮ ಸಿಬ್ಬಂದಿಗೆ ತಿಳಿಸಿದ್ದಾರೆ.
ವರದಿ ಪ್ರಕಾರ, ಹಲವಾರು ವಿಮಾನ ನಿಲ್ದಾಣಗಳಲ್ಲಿ ವ್ಯಾಪಕ ವಿಮಾನ ರದ್ದತಿಗಳು ವರದಿಯಾಗಿವೆ. ಮುಂಬೈ ಏರ್ಪೋರ್ಟ್ನಲ್ಲಿ ಕನಿಷ್ಠ 118 ವಿಮಾನಗಳು, ಬೆಂಗಳೂರಿನಲ್ಲಿ 100, ಹೈದರಾಬಾದ್ನಲ್ಲಿ 75, ಕೋಲ್ಕತ್ತಾದಲ್ಲಿ 35, ಚೆನ್ನೈನಲ್ಲಿ 26 ಮತ್ತು ಗೋವಾದಲ್ಲಿ 11 ವಿಮಾನಗಳು ರದ್ದುಗೊಂಡಿವೆ. ಇವುಗಳಲ್ಲದೆ, ದೇಶದ ಇತರ ಹಲವು ಪ್ರಮುಖ ವಿಮಾನ ನಿಲ್ದಾಣಗಳಿಂದಲೂ ವಿಮಾನ ಸೇವೆಗಳಲ್ಲಿ ವಿಳಂಬವಾಗಿದೆ.
ಆಹಾರ, ಲಗೇಜ್ಗಾಗಿ ಪ್ರಯಾಣಿಕರ ಪರದಾಟ
ಈಗಾಗಲೇ 500ಕ್ಕೂ ಅಧಿಕ ವಿಮಾನಗಳು ರದ್ದಾಗಿದ್ದು, ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ತಮ್ಮ ಲಗೇಜ್ ಪಡೆಯಲು 12 ಗಂಟೆಗಳಿಗೂ ಹೆಚ್ಚು ಕಾಲ ಪರದಾಡುವಂತಾಗಿದೆ. ಕೆಲವರು ಆಹಾರ ಮತ್ತು ನೀರಿನ ಕೊರತೆ ಎದುರಿಸಿದ್ದಾರೆ ಎಂದು ವರದಿಯಾಗಿದೆ.
ನವದೆಹಲಿ ವಿಮಾನ ನಿಲ್ದಾಣದಲ್ಲಿ ಸಾವಿರಾರು ಸೂಟ್ಕೇಸ್ಗಳು ಅಲ್ಲಲ್ಲಿ ಬಿದ್ದಿರುವುದನ್ನು ಮಾಧ್ಯಮಗಳಲ್ಲಿ ನೋಡಬಹುದಾಗಿ. ಇನ್ನು ಅನೇಕ ಪ್ರಯಾಣಿಕರು ಅನಿವಾರ್ಯವಾಗಿ ನೆಲದ ಮೇಲೆ ಮಲಗಿದ್ದರೆ, ಮತ್ತೆ ಕೆಲವರು ಸಿಟ್ಟಿನಿಂದ ವಿಮಾನಯಾನ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾತೆ. ಒಬ್ಬ ಪ್ರಯಾಣಿಕರು ಇದನ್ನು “ಇಂಡಿಗೋ ಕಡೆಯಿಂದ ಮಾನಸಿಕ ಹಿಂಸೆ” ಎಂದು ಬಣ್ಣಿಸಿ, 12 ಗಂಟೆಗಳ ನಂತರವೂ ತಮಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.



