ದಕ್ಷಿಣಕನ್ನಡ: ಕನಿಷ್ಟ ಪಕ್ಷ ದ್ರೋಣ್ ಕೂಡಾ ಹಾರಾಡದ ಆಗಸದಲ್ಲಿ ಏಕಾಏಕಿ ಹೆಲಿಕಾಪ್ಟರ್ ಒಂದು ಹಾರಾಡಿದಾಗ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಜನ ಕೊಂಚ ಉತ್ಸಾಹಿಗಳಾಗಿದ್ದರು. ಹೆಲಿಕಾಪ್ಟರ್ ನಲ್ಲಿ ಪುತ್ತೂರಿಗೆ ಬಂದೋರ್ಯಾರು ಎನ್ನುವ ತವಕ ಎಲ್ಲರಲ್ಲೂ ಸಾಮಾನ್ಯವಾಗಿತ್ತು. ಚುನಾವಣೆಯ ಸಂದರ್ಭದಲ್ಲಿ ಅಥವಾ ಮುಖ್ಯಮಂತ್ರಿಯೋ ಅಥವಾ ಕೇಂದ್ರದ ಮಂತ್ರಿಗಳೋ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿ ,ಪುತ್ತೂರಿಗೆ ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಹೆಲಿಕಾಪ್ಟರ್ ಬಳಕೆ ಮಾಡಿದ್ದಿದೆ. ಅದನ್ನು ಹೊರತುಪಡಿಸಿ ಪುತ್ತೂರಿನ ನಗರಕ್ಕೆ ಹೆಲಿಕಾಪ್ಟರ್ ಬಂದಿದ್ದೇ ಇಲ್ಲ. ಹೆಲಿಕಾಪ್ಟರ್ ಒಂದು ಕಾಲದಲ್ಲಿ ಪುತ್ತೂರಿನ ಹಳ್ಳಿ-ಹಳ್ಳಿಗಳಲ್ಲಿ ಹಾರಾಡಿದ್ದನ್ನು ಈ ಭಾಗದ ಜನ ಇನ್ನೂ ಮರೆತಿಲ್ಲ. ಆ ಸಮಯದಲ್ಲಿ ಹೆಲಿಕಾಪ್ಟರ್ ಮೂಲಕ ಗೇರು ಪ್ಲಾಂಟೇಷನ್ ಗಳಿಗೆ ಕೀಟನಾಶಕವನ್ನು ಬಿಡಲಾಗಿತ್ತು. ಆ ಸಮಯದಲ್ಲಿ ತಿಂಗಳುಗಟ್ಟಲೆ ಪುತ್ತೂರಿನ ತುಂಬಾ ಹೆಲಿಕಾಪ್ಟರ್ ಗಳು ಹಾರಾಡಿದ್ದವು.

ಆದರೆ ನವಂಬರ್ 13 ರಂದು ಹೆಲಿಕಾಪ್ಟರ್ ಒಂದು ಪುತ್ತೂರು ನಗರದ ಮೊಟ್ಟೆತ್ತಡ್ಕ ಎಂಬಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಹೆಲಿಪ್ಯಾಡ್ ನಲ್ಲಿ ಬಂದಿಳಿದಿತ್ತು. ಭಾರೀ ಪ್ರಮಾಣದ ಧೂಳೆಬ್ಬಿಸಿ ಇಳಿದ ಹೆಲಿಕಾಪ್ಟರ್ ಅನ್ನು ನೋಡಲು ಸುತ್ತಮುತ್ತಲಿನ ಜನರೂ ನೆರೆದಿದ್ದರು. ಆದರೆ ಹೆಲಿಕಾಪ್ಟರ್ ನಲ್ಲಿ ಪುತ್ತೂರಿಗೆ ಬಂದವರ್ಯಾರು ಎಂದು ಪುತ್ತೂರಿನ ಜನರಿಗೆ ಈವರೆಗೂ ತಿಳಿದಿಲ್ಲ.

ಮಾಹಿತಿಯ ಪ್ರಕಾರ ಕೇರಳ ಮೂಲಕ ಜ್ಯುವೆಲ್ಲರಿ ಕಂಪನಿಗೆ ಸೇರಿದ ಕೆಲವರು ಪುತ್ತೂರಿಗೆ ಹೆಲಿಕಾಪ್ಟರ್ ಮೂಲಕ ಬಂದಿಳಿದ ವಿಚಾರ ತಿಳಿದು ಬಂದಿದೆ. ಪುತ್ತೂರಿನಲ್ಲಿ ಚಿನ್ನದ ವ್ಯಾಪಾರಿಗಳಿಗೆ ಉತ್ತಮ ಬೇಡಿಕೆಯಿದೆ ಎಂದು ತಿಳಿದಿರುವ ಹಲವಾರು ಜ್ಯುವೆಲ್ಲರಿ ಕಂಪನಿಗಳು ಪುತ್ತೂರಿನಲ್ಲಿ ಈಗಾಗಲೇ ತೆರೆದಿದ್ದು, ಮತ್ತಷ್ಟು ಜ್ಯುವೆಲ್ಲರಿ ಕಂಪನಿಗಳು ಪುತ್ತೂರಿಗೆ ಆಗಮಿಸಲು ಹಾತೊರೆದು ನಿಂತಿದೆ ಅನ್ನೋದಕ್ಕೆ ಈ ಹೆಲಿಕಾಪ್ಟರ್ ಆಗಮನ ಕೂಡಾ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *