ಕಡಬ: 1951ರಲ್ಲಿ ಸ್ಥಾಪನೆಯಾದ ಪಂಜ ಸರ್ಕಾರಿ ಪದವಿ ಪೂರ್ವ ಕಾಲೇಜು ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲುತ್ತಿರುವ ಸಂದರ್ಭದಲ್ಲಿ, ಡಿಸೆಂಬರ್ 28ರಂದು ನಡೆಯಲಿರುವ “ಅಮೃತಪಥ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಭವ್ಯವಾಗಿ ಬಿಡುಗಡೆ ಮಾಡಲಾಯಿತು.

ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಅಮೃತಪಥ ಸಮಿತಿ ಅಧ್ಯಕ್ಷ ಜಾಕೆ ಮಾಧವ ಗೌಡರ ಅಧ್ಯಕ್ಷತೆಯಲ್ಲಿ ಕಾಲೇಜು ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಮತಿ ಎನ್.ಎಸ್. ಮಹಾದೇವಿ ಏನಡ್ಕ ಅವರು ಆಮಂತ್ರಣ ಪತ್ರಿಕೆಯನ್ನು ಅನಾವರಣಗೊಳಿಸಿ ಶುಭಾಶಯ ಕೋರಿದರು.

ವೇದಿಕೆಯಲ್ಲಿ ಅಮೃತಪಥ ಸಮಿತಿ ಪ್ರಧಾನ ಕಾರ್ಯದರ್ಶಿ ಸವಿತಾರ ಮುಡೂರು, ಪ್ರಧಾನ ಸಂಚಾಲಕ ಚಿನ್ನಪ್ಪ ಸಂಕಡ್ಕ, ಕಾಲೇಜಿನ ಪ್ರಾಂಶುಪಾಲ ಚಿದಾನಂದ, ಮುಖ್ಯ ಶಿಕ್ಷಕ ದೇವಿ ಪ್ರಸಾದ, ಸಮಿತಿ ಕಾರ್ಯದರ್ಶಿ ಗುರುಪ್ರಸಾದ್ ತೋಟ, ಖಜಾಂಜಿ ಜಯರಾಮ ಕಂಬಳ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಚಿನ್ನಪ್ಪ ಕಾಣಿಕೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಾಚಣ್ಣ ಕೆರೆಮೂಲೆ ಆಹ್ವಾನಿತರನ್ನು ವೇದಿಕೆಗೆ ಬರಮಾಡಿಕೊಂಡರು. ಜಾಕೆ ಮಾಧವ ಗೌಡ ಸ್ವಾಗತಿಸಿ, ಸವಿತಾರ ಮುಡೂರು ವಂದಿಸಿದರು.

ಅಮೃತಪಥಕ್ಕೆ ಆರ್ಥಿಕ ನೆರವು ಘೋಷಣೆ:
ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿರುವ ಅಮೃತಪಥ ಕಾರ್ಯಕ್ರಮ ಮತ್ತು ಶಾಶ್ವತ ಯೋಜನೆಗಾಗಿ ಜಾಕೆ ಮಾಧವ ಗೌಡರು, ಹಿರಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಪ್ರೇಮಿಗಳಿಂದ ಆರ್ಥಿಕ ಕೈಜೋಡಣೆಗೆ ಕರೆ ನೀಡಿದರು. ಸಭೆಯಲ್ಲೇ ಹಲವು ಮಂದಿ ಉದಾರವಾಗಿ ತಮ್ಮ ಆರ್ಥಿಕ ಸಹಕಾರವನ್ನು ಘೋಷಿಸಿದರು.

ಅಮೃತ ಮಹೋತ್ಸವ ಸಮಾರಂಭಕ್ಕೆ ಭವ್ಯ ಸಿದ್ಧತೆಗಳು ಈಗಾಗಲೇ ಆರಂಭವಾಗಿದ್ದು, ಪಂಜ ಕಾಲೇಜು ಪ್ರದೇಶದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ.

Leave a Reply

Your email address will not be published. Required fields are marked *