ಪುತ್ತೂರು: ದ.ಕ. ಜಿಲ್ಲೆಯ ಪುತ್ತೂರಿನ ದರ್ಬೆ ಪ್ರದೇಶದಲ್ಲಿ ENT ಕ್ಲಿನಿಕ್‌ಗೆ ನುಗ್ಗಿ ಸಿಬ್ಬಂದಿಗೆ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನವೆಂಬರ್ 29ರಂದು ನಡೆದಿದೆ.

ಡಾ. ರಾಮಮೋಹನ್ ರಾವ್ ಅವರ ಕ್ಲಿನಿಕ್‌ಗೆ ನುಗ್ಗಿದ ಪುತ್ತೂರಿನ ಬಪ್ಪಳಿಗೆ ನಿವಾಸಿ ಇಬ್ರಾಹಿಂ, ತನ್ನ ಪರಿಚಯಸ್ಥರನ್ನು ತಪಾಸಣೆಗೆ ತಕ್ಷಣ ಒಳಗೆ ಬಿಡಲಿಲ್ಲ ಎಂಬ ಕಾರಣಕ್ಕೆ ಕ್ಲಿನಿಕ್ ಸಿಬ್ಬಂದಿಯೊಂದಿಗೆ ಅಶಿಸ್ತಿನ ವರ್ತನೆ ನಡೆಸಿದ್ದಾನೆ.

ಸಿಬ್ಬಂದಿ ಶ್ರೀಕಾಂತ್ ಮೇಲೆ ದಾಳಿ ಮಾಡಿರುವ ಇಬ್ರಾಹಿಂ, ಬಳಿಕ ಕ್ಲಿನಿಕ್‌ನಲ್ಲಿ ಗಲಾಟೆ ಸೃಷ್ಟಿಸಿ ಗ್ಲಾಸ್ ಪುಡಿಗೈದು ರೋಗಿಗಳಲ್ಲಿ ಭಯ ಹುಟ್ಟಿಸಿದ್ದಾನೆ. ಘಟನೆಯ ವೇಳೆ ಅವಾಚ್ಯ ಶಬ್ದಗಳಲ್ಲಿ ಬೈದಿರುವುದೂ ತಿಳಿದುಬಂದಿದೆ.

ಈ ದಾಂಧಲೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಗಮನ ಸೆಳೆದಿದೆ.

ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಇಬ್ರಾಹಿಂ ವಿರುದ್ಧ ಪ್ರಕರಣ ದಾಖಲಾಗಿ, ಮುಂದಿನ ತನಿಖೆ ಪ್ರಗತಿಯಲ್ಲಿದೆ.

Leave a Reply

Your email address will not be published. Required fields are marked *