ಬೆಳ್ಳಾರೆ ಸಮೀಪದ ಕಲ್ಲೋಣಿಯಲ್ಲಿ ಬೈಕ್ ಅಪಘಾತ ಸಂಭವಿಸಿ ಶಬರಿಮಲೆಗೆ ಹೋಗಿ ಬಂದಿದ್ದ ಯುವಕ ನಿಶಾಂತ್ ಮೃತಪಟ್ಟಿದ್ದಾರೆ. ತಂದೆ ಮೋನಪ್ಪ ಗಂಭೀರ ಗಾಯಗೊಂಡಿದ್ದಾರೆ.

ಕಡಬ: ಶಬರಿಮಲೆ ಯಾತ್ರೆ ಮುಗಿಸಿ ಮನೆಗೆ ಬಂದ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಅಯ್ಯಪ್ಪ ಸ್ವಾಮಿಯ ಪ್ರಸಾದವನ್ನು ಸಂಬಂಧಿಕರಿಗೆ ನೀಡಲು ಬೈಕ್‌ನಲ್ಲಿ ತೆರಳುತ್ತಿದ್ದ ತಂದೆ-ಮಗ ರಸ್ತೆ ಅಪಘಾತಕ್ಕೀಡಾಗಿ, ಮಗ ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆಳ್ಳಾರೆ ಸಮೀಪದ ಕಲ್ಲೋಣಿಯಲ್ಲಿ ನಡೆದಿದೆ.

ಮರ್ದಾಳ ಸಮೀಪದ ಕೊಲ್ಯ ನಿವಾಸಿ ನಿಶಾಂತ್ ಮೃತಪಟ್ಟ ದುರ್ದೈವಿ ಯುವಕ. ಇವರ ತಂದೆ ಮೋನಪ್ಪ ಅವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಜನವರಿ 20ರ ಮುಂಜಾನೆ ಈ ಅವಘಡ ಸಂಭವಿಸಿದೆ. ನಿಶಾಂತ್ ಅವರು ಇತ್ತೀಚೆಗಷ್ಟೇ ಶಬರಿಮಲೆಗೆ ಹೋಗಿ ಬಂದಿದ್ದರು. ಪ್ರಸಾದವನ್ನು ಕುಟುಂಬಸ್ಥರಿಗೆ ಮತ್ತು ಸಂಬಂಧಿಕರಿಗೆ ತಲುಪಿಸಲು ತಂದೆಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬೆಳ್ಳಾರೆ ಸಮೀಪದ ಕಲ್ಲೋಣಿ ಎಂಬಲ್ಲಿನ ಅಪಾಯಕಾರಿ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಯಿಂದ ಕೆಳಕ್ಕೆ ಬಿದ್ದಿದೆ.

ಬೈಕ್ ಮೋರಿಯಿಂದ ಕೆಳಕ್ಕೆ ಬಿದ್ದ ರಭಸಕ್ಕೆ ನಿಶಾಂತ್ ಅವರಿಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಎದುರಿನಿಂದ ಬಂದ ವಾಹನವೊಂದನ್ನು ತಪ್ಪಿಸಲು ಹೋಗಿ ಈ ಅವಘಡ ಸಂಭವಿಸಿದೆಯೇ ಅಥವಾ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಘಟನಾ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣಕ್ಕಾಗಿ ತನಿಖೆ ಕೈಗೊಂಡಿದ್ದಾರೆ. ಶಬರಿಮಲೆ ಯಾತ್ರೆ ಮುಗಿಸಿ ಬಂದ ಬೆನ್ನಲ್ಲೇ ಯುವಕ ಸಾವನ್ನಪ್ಪಿರುವುದು ಮರ್ದಾಳ ಮತ್ತು ಕೊಲ್ಯ ಪರಿಸರದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ

Leave a Reply

Your email address will not be published. Required fields are marked *