ಪುತ್ತೂರು : ಪವಿತ್ರ ರಂಝಾನ್ ಉಪವಾಸದ 27ನೇ ದಿನದಂದು ಪುತ್ತೂರಿನ ಬಪ್ಪಳಿಗೆ ಪ್ರದೇಶದಲ್ಲಿ ಮಾನವೀಯತೆ ಹಾಗೂ ಸೌಹಾರ್ಧತೆಗೆ ಸಾಕ್ಷಿಯಾದ ಸ್ಪೂರ್ತಿದಾಯಕ ಘಟನೆ ನಡೆದಿದೆ.
ಬಪ್ಪಳಿಗೆ ಜಮಾಅತ್‌ಗೆ ಒಳಪಟ್ಟ ಮುಸ್ಲಿಂ ಯುವಕರು ಹಾಗೂ ಬಪ್ಪಳಿಗೆ ಮಸೀದಿಯ ಧರ್ಮಗುರು ಸಿರಾಜುದ್ದೀನ್ ಫೈಝಿ ಅವರ ನೇತೃತ್ವದಲ್ಲಿ ರೋಗಪೀಡಿತ ಬಡ ಕುಟುಂಬಗಳಿಗೆ ನೆರವು ನೀಡಲಾಯಿತು. ಹಿಂದೂ ಧರ್ಮದವರಾದ ಮೂರು ಬಡ ಕುಟುಂಬಗಳನ್ನು ಗುರುತಿಸಿ, ಅವರಿಗೆ ಒಂದು ತಿಂಗಳಿಗೆ ಸಾಕಾಗುವ ದಿನನಿತ್ಯ ಬಳಕೆಯ ಸಾಮಗ್ರಿಗಳು ಹಾಗೂ ಧನಸಹಾಯ ವಿತರಿಸಲಾಯಿತು.

ರೋಗದಿಂದ ಹಾಸಿಗೆಯಲ್ಲೇ ಇರುವವರ ಮನೆಗಳಿಗೆ ತೆರಳಿ ನೇರವಾಗಿ ಸಹಾಯಹಸ್ತ ನೀಡುವ ಮೂಲಕ, ಧರ್ಮಭೇದ ಮೀರಿದ ಸೌಹಾರ್ಧತೆ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ.
ಈ ಕುರಿತು ಮಾತನಾಡಿದ ಧರ್ಮಗುರು ಸಿರಾಜುದ್ದೀನ್ ಫೈಝಿ ಅವರು, “ರಂಝಾನ್ ಉಪವಾಸದ ಸಂದರ್ಭದಲ್ಲಿ ಅಗತ್ಯವಿರುವವರಿಗೆ ನೆರವಾಗುವುದು ಅತ್ಯಂತ ಪುಣ್ಯದ ಕೆಲಸ. ರೋಗಪೀಡಿತರು ಬೇಗ ಗುಣಮುಖರಾಗಲಿ, ಅವರಿಗೆ ಧೈರ್ಯ ತುಂಬುವ ಕೆಲಸ ಮುಂದುವರಿಯುತ್ತದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಪ್ಪಳಿಗೆ ಮಸೀದಿ ಅಧ್ಯಕ್ಷ ದಾವೂದ್ ಬಪ್ಪಳಿಗೆ, ಪಿ.ಕೆ. ಮಹಮ್ಮದ್ ಹಾಜಿ, ಬಿ.ಎಚ್. ಮಹಮ್ಮದ್ ಹಾಜಿ, ಇಕ್ಬಾಲ್ ಯು.ಕೆ., ಅನ್ಸಾರುಲ್ ಇಸ್ಲಾಂ ಯುವಕ ಸಮಿತಿಯ ಸಾಯಿಕ್, ಮೋನು ಬಪ್ಪಳಿಗೆ, ಬಿ.ಎಚ್. ಅಬ್ದುಲ್ ರಝಾಕ್, ಹಂಝ ಬಿ.ಎಚ್., ನೂರುದ್ಧೀನ್, ಶಾಫಿ ಕೆವೈಪಿ, ನಯಾಝ್ ಖಾನ್, ಅಬ್ದುಲ್ ಜಬ್ಬಾರ್, ಜಲಾಲುದ್ದೀನ್, ಹೈದರ್, ಸವಾದ್, ಶಾಕಿರ್, ಮೊಯ್ದು ರಫೀಕ್, ಅದ್ದು ನಾಝೂಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *