ಉದ್ಯಮಿ ಉಜ್ವಲ್ ಪ್ರಭು

ಕಾಂಗ್ರೆಸ್ ಮುಖಂಡ ಮಹಮ್ಮದ್ ಆಲಿ
ಪುತ್ತೂರು: ನೆಹರೂನಗರ ನಿವಾಸಿಯಾಗಿರುವ ರಿಯಲ್ ಎಸ್ಟೇಟ್ ಉದ್ಯಮಿ ಉಜ್ವಲ್ ಕುಮಾರ್ ಪ್ರಭು(39) ಅವರ ಕುರಿತು ಅಪಪ್ರಚಾರ ಮಾಡಿದ ಆರೋಪದಡಿ ಬಿಎಲ್ಆರ್ ಪೋಸ್ಟ್ ವೆಬ್ ಸೈಟ್ನ ಪಬ್ಲಿಷರ್, ಎಡಿಟರ್ ಮತ್ತು ಕಾಂಗ್ರೆಸ್ ಮುಖಂಡ ಎಚ್. ಮಹಮ್ಮದ್ ಆಲಿ ಸೇರಿ ಮೂವರ ವಿರುದ್ಧ ಪುತ್ತೂರಿನ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.






ಪ್ರಥಮ ಆರೋಪಿಯಾಗಿ ಪಬ್ಲಿಷರ್ ಬಿಎಲ್ಆರ್ ಪೋಸ್ಟ್, ಎರಡನೇ ಆರೋಪಿಯಾಗಿ ಎಡಿಟರ್ ಬಿಎಲ್ಆರ್ ಪೋಸ್ಟ್ ಮತ್ತು ಮೂರನೇ ಆರೋಪಿಯಾಗಿ ಎಚ್. ಮಹಮ್ಮದ್ ಆಲಿ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 356(2) ಮತ್ತು 356(3) ರಡಿ ಕೇಸ್ ದಾಖಲಾಗಿದ್ದು ವಿಚಾರಣೆಗೆ ಹಾಜರಾಗಲು ನ್ಯಾಯಾಲಯದಿಂದ ನೊಟೀಸ್ ಜಾರಿಯಾಗಿದೆ. ಮುಂದಿನ ವಿಚಾರಣೆ ಮಾ.24ರಂದು ನಡೆಯಲಿದೆ.


ಪುತ್ತೂರಿನ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಉಜ್ವಲ್ ಕುಮಾರ್ ಪ್ರಭು ಅವರು ದಾಖಲಿಸಿರುವ ಕ್ರಿಮಿನಲ್ ಕೇಸ್ನಲ್ಲಿ ‘ನಾನು 10 ವರ್ಷಗಳಿಂದ ಯು.ಆರ್. ಪ್ರಾಪರ್ಟೀಸ್ ಎಂಬ ಹೆಸರಿನಡಿ ಡೆವಲಪರ್ ಆಗಿ ಕೆಲಸಮಾಡುತ್ತಿದ್ದೇನೆ. ಪ್ರಾಪರ್ಟಿಯನ್ನು ನನ್ನ ಹೆಂಡತಿಯ ಹೆಸರಿನಲ್ಲಿ ಖರೀದಿಸಿ ನಂತರ ನಮ್ಮ ಕಂಪನಿಯ ಮೂಲಕ ಡೆವಲಪ್ ಮಾಡಿ ನಂತರ ಕ್ರೈಂಟ್ ಗಳಿಗೆ ಸೈಟ್ ಮಾರಾಟ ಮಾಡುತ್ತೇವೆ. ಶ್ರೀ ಮಾರ್ಕಿಂಗ್ ಪಾರ್ಕ್ ಎಂಬ ಹೆಸರಿನಲ್ಲಿ ಲೇಔಟ್ ಅನ್ನು ಚಿಕ್ಕಮುಡ್ನರು ಗ್ರಾಮದ ಬೆದ್ರಾಳ ಎಂಬಲ್ಲಿ ಸ್ಥಾಪಿಸಿದ್ದು ಅದರ ಜಾಗದ ಮಾಲಿಕರು ನನ್ನ ಹೆಂಡತಿಯಾಗಿರುತ್ತಾರೆ. ನಾನು ಡೆವಲಪರ್ ಆಗಿರುತ್ತೇನೆ. ಅದು ಸರ್ಕಾರದಿಂದ ಮತ್ತು ರೇರಾದಿಂದ ಅನುಮೋದಿತ ಪ್ರಾಜೆಕ್ಟ್ ಆಗಿರುತ್ತದೆ. 2 ವಾರಗಳ ಹಿಂದೆ ವಾಟ್ಸಾಪ್ ಗ್ರೂಪ್ ನಲ್ಲಿ ಬಿಎಲ್ಆರ್. ಪೋಸ್ಟ್ ಎಂಬ ವೆಬ್ ನ್ಯೂಸ್ ಸೈಟ್ನಲ್ಲಿ ನಮ್ಮ ಕಂಪೆನಿಯ ಬಗ್ಗೆ ಮತ್ತು ನನ್ನ ಬಗ್ಗೆ, ಅನಧಿಕೃತವಾಗಿ ಸರ್ಕಾರದ ಜಾಗವನ್ನು ಕಬಳಿಸಿರುತ್ತೇವೆ ಎಂದು ಅಪಪ್ರಚಾರ ಮಾಡಿ ನ್ಯೂಸ್ ಐಟಂಗಳನ್ನು ಹಾಕಿರುತ್ತಾರೆ. ಸದರಿ ನ್ಯೂಸ್ ಐಟಂಗಳು ವಾಟ್ಸಾಪ್ ಗ್ರೂಪ್ ಗಳಲ್ಲಿ ವೈರಲ್ ಆಗಿರುತ್ತವೆ. 3ನೇ ಆರೋಪಿ ಸ್ವಯಂಘೋಷಿತ ಆರ್ಟಿಐ ಕಾರ್ಯಕರ್ತನಾಗಿದ್ದು ಆತ ಬಿಎಲ್ಆರ್.ಪೋಸ್ಟ್ ರವರಿಗೆ ಸುಳ್ಳು ಮಾಹಿತಿ ನೀಡಿ ನಮ್ಮ ವಿರುದ್ಧ ಸುಳ್ಳು ಸುದ್ದಿಯನ್ನು ಪ್ರಕಟಿಸುವಂತೆ ಮಾಡಿರುತ್ತಾರೆ. ಸದರಿ ಸುಳ್ಳು ಸುದ್ದಿಯನ್ನು 3ನೇ ಆರೋಪಿಯು ಪುತ್ತೂರು ಬ್ಲಾಕ್ ಕಾಂಗ್ರೆಸ್, ಪುತ್ತೂರು
ಎಂಎಲ್ಎ ಅಶೋಕ್ ಕುಮಾರ್ ರೈ, ರಾಜಕೀಯ ವೇದಿಕೆ ಎಂಬ ವಾಟ್ಸಾಪ್ ಗ್ರೂಪ್ ಗಳಿಗೆ ಮತ್ತು ನನ್ನ ಸ್ನೇಹಿತರಾದ ರಾಕೇಶ್, ನಿತಿನ್, ಸಂದೀಪ್ ನೆಲ್ಲಿಕಟ್ಟಿ ಸಹಿತ ಸಾರ್ವಜನಿಕರಿಗೆ ಕಳುಹಿಸಿರುತ್ತಾರೆ. 3ನೇ ಆರೋಪಿಗೆ ಯಾವುದೇ ಉದ್ಯೋಗ ಇರುವುದಿಲ್ಲ. ಅವರು ಇದೇ ರೀತಿ ಹಲವಾರು ವರ್ಷಗಳಿಂದ ಸುಳ್ಳಾಗಿ ಆರ್ಟಿಐನಡಿಯಲ್ಲಿ ಸುಳ್ಳು ಮಾಹಿತಿಯನ್ನು ಅಪಪ್ರಚಾರ ಮಾಡಿ ಹೆಸರನ್ನು ಹಾಳು ಮಾಡುತ್ತಾರೆ. ನನ್ನ ಹೆಸರನ್ನು ಹಾಳು ಮಾಡುವ ದುರುದ್ದೇಶದಿಂದ ಈ ರೀತಿ ಅಪಪ್ರಚಾರ ಮಾಡಿರುತ್ತಾರೆ. ಬೇರೆಯವರ ಮುಖಾಂತರ ನನ್ನಲ್ಲಿ ದುಡ್ಡನ್ನು ಕೂಡಾ ಕೇಳಿರುತ್ತಾರೆ. ಸದರಿ ವರದಿ ಬಿಡುಗಡೆ ಮಾಡುವ ಮೊದಲು ನಮ್ಮಲ್ಲಿ ಯಾವುದೇ ರೀತಿಯ ದಾಖಲಾತಿಗಳನ್ನು ಪರಿಶೀಲಿಸಿರುವುದಿಲ್ಲ.
ಎ.ಸಿ.ರವರ ಛಾಯಾಚಿತ್ರವನ್ನು ನಮ್ಮ ಸೈಟ್ ನೊಂದಿಗೆ ಕೊಲೇಜ್ ಮಾಡಿ ನಮ್ಮ ಸೈಟ್ ಅನ್ನು ಇನ್ ಸ್ಪೆಕ್ಷನ್ ಮಾಡುವ ರೀತಿಯಲ್ಲಿ ನಮ್ಮ ಸೈಟ್ ಅನ್ನು ಜನರು ಖರೀದಿಸದಂತೆ ಮಾಡಿರುತ್ತಾರೆ. ಆರೋಪಿತರು ಈ ರೀತಿ ಮಾಡಿದ್ದರಿಂದ ನಮ್ಮ ಪ್ರಾಜೆಕ್ಟ್ಗಳ ಬಗ್ಗೆ ಗ್ರಾಹಕರಲ್ಲಿ ಆತಂಕ ಮೂಡಿ ಪ್ರಾಜೆಕ್ಟ್ಗಳನ್ನು ಯಾರೂ ಖರೀದಿಸಿರುವುದಿಲ್ಲ. ಇದರಿಂದ ಆರ್ಥಿಕವಾಗಿ ನಷ್ಟವಾಗಿರುತ್ತದೆ. ಶ್ರೀಮಾ ನೆಸ್ಟ್ ಮಂಗಳೂರಿನಲ್ಲಿ, ಪುತ್ತೂರಿನಲ್ಲಿ ಪುತ್ತೂರು ಕ್ಲಬ್ ಪಕ್ಕ ಶ್ರೀಮಾ ಸೆಲೆಸ್ಟಿಯಲ್, ಜಿ.ಎಲ್. ಮಾಲ್ನ ಪಕ್ಕ ಶ್ರೀಮಾ ಹೈಟ್ಸ್, ಕಲ್ಲಡ್ಕದಲ್ಲಿ ಶ್ರೀಮಾ ಟೌನ್ ಶಿಪ್ ಎಂಬ ಹೆಸರಿನಲ್ಲಿ ಪ್ರಾಜೆಕ್ಟ್ಗಳು ನಡೆಯುತ್ತಿರುತ್ತವೆ. ಈ ರೀತಿಯ ಅಪಪ್ರಚಾರದಿಂದ ನಮ್ಮ ಬಗ್ಗೆ ಬ್ಯಾಂಕ್ ನವರಿಗೆ ಅಪನಂಬಿಕೆ ಮೂಡಿ ಬ್ಯಾಂಕ್ ನಲ್ಲಿ ಲೋನ್ ಪಡೆಯಲು ಕಷ್ಟವಾಗಿರುತ್ತದೆ. ನಮ್ಮಲ್ಲಿ ಸುಮಾರು 800 ಗ್ರಾಹಕರಿದ್ದು ಎಲ್ಲರೂ ನಮ್ಮಲ್ಲಿ ಬಂದು ವಿಚಾರಿಸುತ್ತಿದ್ದಾರೆ. ನಮ್ಮ ಮೇಲಿನ ಅವರ ನಂಬಿಕೆಗೆ ಕುಂದಾಗಿರುತ್ತದೆ. ಈ ರೀತಿ ಅಪಪ್ರಚಾರದಿಂದ ನಮ್ಮ ಕುಟುಂಬದ ಒಳ್ಳೆಯ ಹೆಸರಿಗೂ ಕೂಡಾ ಕಳಂಕ ಬಂದಿರುತ್ತದೆ. ಆರೋಪಿಯ ಈ ಕೃತ್ಯದಿಂದ ನಮಗೆ ಸುಮಾರು 5 ಕೋಟಿಯಷ್ಟು ನಷ್ಟವುಂಟಾಗಿರುತ್ತದೆ. 1 ಮತ್ತು 2ನೇ ಆರೋಪಿತರ ವಿಳಾಸ ನನಗೆ ಸಿಕ್ಕಿರುವುದಿಲ್ಲ. ಆದ್ದರಿಂದ ಅವರ ಇ-ಮೇಲ್ ಐಡಿಯನ್ನು ನೀಡಿರುತ್ತೇನೆ. ಈ ಮೇಲೆ ಆರೋಪಿಸಿದ ಪ್ರಕರಣದ ಬಾಬು ಪ್ರಕರಣ ದಾಖಲಿಸಿ ಆರೋಪಿತರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿಕೊಳ್ಳುತ್ತೇನೆ. ನನ್ನ ಪರವಾಗಿ ದಾಖಲೆಗಳನ್ನು ಹಾಜರುಪಡಿಸಿರುತ್ತೇನೆ’ ಎಂದು ತಿಳಿಸಿದ್ದಾರೆ.
ನ್ಯಾಯಾಲಯ ಉಜ್ವಲ್ ಪ್ರಭು ಅವರ ಹೇಳಿಕೆ ದಾಖಲಿಸಿಕೊಂಡಿದೆ. ಉಜ್ವಲ್ ಪ್ರಭು ಪರ ವಕೀಲ ನಾಗೇಶ್ ಶರ್ಮ ವಾದ ಮಂಡಿಸಿದ್ದರು.

