ಕಡಬ: ವಾಯುಭಾರ ಕುಸಿತದ ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಾದ್ಯಂತ ಮಂಗಳವಾರ (ಜ.13) ಸಂಜೆ ಗುಡುಗು–ಮಿಂಚು ಸಹಿತ ಭಾರಿ ಅಕಾಲಿಕ ಮಳೆ ಸುರಿದಿದೆ. ಕುಮಾರ ಪರ್ವತದ ತಪ್ಪಲಿನ ಪ್ರದೇಶಗಳು ಸೇರಿದಂತೆ ಕಡಬ, ನೆಟ್ಟಣ, ಪಂಜ ಹಾಗೂ ಕುಕ್ಕೆ ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು.

ಹೊಸ ವರ್ಷದ ಮೊದಲ ಮಳೆ:
2026ರ ಹೊಸ ವರ್ಷದ ಆರಂಭದಲ್ಲೇ ಸುರಿದ ಈ ಅಕಾಲಿಕ ಮಳೆ ಜನರಿಗೆ ಅಚ್ಚರಿಯನ್ನೂ ಆತಂಕವನ್ನೂಂಟುಮಾಡಿದೆ. ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಿರಂತರವಾಗಿ ಸುರಿದ ಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿ ಹರಿದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸಂಜೆ ಸಮಯದಲ್ಲಿ ಕಚೇರಿಯಿಂದ ಮನೆಗೆ ಮರಳುತ್ತಿದ್ದ ನಾಗರಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.

ಭಕ್ತರು–ಪ್ರಯಾಣಿಕರ ಪರದಾಟ:
ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು ಅಕಾಲಿಕ ಮಳೆಗೆ ಸಿಲುಕಿ ಪರದಾಡುವಂತಾಯಿತು. ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು ಹಾಗೂ ದೇವಾಲಯದತ್ತ ತೆರಳುತ್ತಿದ್ದ ಭಕ್ತಾದಿಗಳು ಸೂಕ್ತ ಆಸರೆಯಿಲ್ಲದೆ ಮಳೆಯಲ್ಲಿ ನಿಂತು ಕಾಯಬೇಕಾಯಿತು.

ಮಾರುಕಟ್ಟೆಯಲ್ಲಿ ಅವಾಂತರ:
ಬುಧವಾರ ಮಕರ ಸಂಕ್ರಾಂತಿ ಹಬ್ಬ ಇರುವ ಹಿನ್ನೆಲೆ ಮಂಗಳವಾರ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಜೋರಾಗಿತ್ತು. ಆದರೆ ಸಂಜೆ ಸುರಿದ ಧಾರಾಕಾರ ಮಳೆಯು ವ್ಯಾಪಾರಸ್ಥರು ಹಾಗೂ ಗ್ರಾಹಕರ ಉತ್ಸಾಹಕ್ಕೆ ತಣ್ಣೀರೆರಚಿದಂತಾಯಿತು. ಹೂವು, ಹಣ್ಣು ಹಾಗೂ ತರಕಾರಿ ಖರೀದಿಗೆ ಬಂದ ಜನರು ಮಳೆಯಿಂದ ತಪ್ಪಿಸಿಕೊಳ್ಳಲು ಅಂಗಡಿ ಮುಂಗಟ್ಟುಗಳ ಆಶ್ರಯ ಪಡೆದರು.
ಬೆಳೆಗಾರರಲ್ಲಿ ಆತಂಕ:
ಚಳಿಗಾಲದ ಅವಧಿಯಲ್ಲಿ ಸುರಿದ ಈ ಅಕಾಲಿಕ ಮಳೆಯಿಂದ ತೋಟಗಾರಿಕಾ ಬೆಳೆಗಳಾದ ಅಡಿಕೆ, ಕಾಫಿ ಬೆಳೆಗಾರರಲ್ಲಿ ಆತಂಕ ಮೂಡಿದೆ. ಒಟ್ಟಾರೆ, ಸಂಕ್ರಾಂತಿ ಹಬ್ಬದ ಮುನ್ನ ಸುರಿದ ಈ ಮಳೆ ಕಡಬ ಮತ್ತು ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತಲಿನ ಜನರಿಗೆ ಕಿರಿಕಿರಿ ಹಾಗೂ ಅಸ್ತವ್ಯಸ್ತತೆಯನ್ನುಂಟುಮಾಡಿದೆ.
.

Leave a Reply

Your email address will not be published. Required fields are marked *