ಪುತ್ತೂರು: ಜನಪದ ಕ್ರೀಡೆಯಾದ ಕಂಬಳವನ್ನು ಉತ್ತೇಜಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದ ಪುತ್ತೂರು ಕೋಟಿ–ಚೆನ್ನಯ್ಯ ಜೋಡು ಕರೆ ಕಂಬಳವು ಜನವರಿ 24 ಮತ್ತು 25ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರನಾಡು ಗದ್ದೆಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಂಬಳಕ್ಕೆ ವಿಶೇಷ ಮೆರುಗು ನೀಡಲು ಚಿತ್ರರಂಗದ ಖ್ಯಾತ ನಟ-ನಟಿಯರು ಭಾಗವಹಿಸಲಿದ್ದಾರೆ.





ಈ ಕಂಬಳದಲ್ಲಿ ಸಿನೆಮಾ ನಟಿಯರಾದ ಪ್ರಿಯಾಂಕ ಉಪೇಂದ್ರ, ರಕ್ಷಿತಾ ಶೆಟ್ಟಿ, ನಟರಾದ ಆದಿತ್ಯ, ಶ್ರೀಯಾನ್ ಮಂಜು, ಶನಿಲ್ ಗುರು, ಜಿ.ಪಿ. ತುಮಿನಾಡು, ಪ್ರಕಾಶ್ ತುಮಿನಾಡು, ಧರ್ಮ ಕೀರ್ತಿ ರಾಜ್ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ಸಿಂಗರ್ ಬಾಬು ಮೊದಲಾದ ಅನೇಕ ನಟ-ನಟಿಯರು ಕಂಬಳ ವೀಕ್ಷಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲಿದ್ದಾರೆ.
ಪುತ್ತೂರು ಕೋಟಿ–ಚೆನ್ನಯ್ಯ ಜೋಡು ಕರೆ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಅವರು ಮಾತನಾಡಿ, ಕಂಬಳಕ್ಕೆ ಜನರಿಂದ ಉತ್ತಮ ಸ್ಪಂದನೆ ಲಭಿಸುತ್ತಿದ್ದು, ಈ ಬಾರಿ ಸಿನೆಮಾ ತಾರೆಯರ ಆಗಮನದಿಂದ ಕಂಬಳದ ಆಕರ್ಷಣೆ ಮತ್ತಷ್ಟು ಹೆಚ್ಚಲಿದೆ ಎಂದು ತಿಳಿಸಿದರು.




