ಸವಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಪಾರ್ಲ–ಕಲ್ಲಗಂಡಿ ಕಾಲನಿಗೆ ರಸ್ತೆ ಸಂಪರ್ಕ ಕಲ್ಪಿಸುವ ಮೂಲಕ ಅಲ್ಲಿನ ನಿವಾಸಿಗಳ ಹಲವು ವರ್ಷಗಳ ಬಹುಕಾಲದ ಬೇಡಿಕೆ ಇದೀಗ ಈಡೇರಿದಂತಾಗಿದೆ.




ಇಲ್ಲಿನ ಜನರು ಸಂಪರ್ಕ ರಸ್ತೆಯ ಕೊರತೆಯಿಂದ ದಿನನಿತ್ಯದ ಸಂಚಾರ, ಶಾಲೆ–ಕಾಲೇಜು, ಆರೋಗ್ಯ ಸೇವೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದೀಗ ಖಾಸಗಿ ಜಮೀನಿನ ಮಾಲಕರೊಂದಿಗೆ ಸೌಹಾರ್ದ ಮಾತುಕತೆ ನಡೆಸಿ ರಸ್ತೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ.



ರಸ್ತೆ ನಿರ್ಮಾಣಕ್ಕೆ ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಬಿ.ಎಸ್ ಹಾಗೂ ಅಭಿವೃದ್ಧಿ ಅಧಿಕಾರಿ ವಸಂತ ಶೆಟ್ಟಿ ಅವರು ಅನುದಾನ ಒದಗಿಸಿದ್ದಾರೆ. ಪಾಲ್ತಾಡಿ ವಾರ್ಡ್–1ರ ಸದಸ್ಯರಾದ ತಾರನಾಥ ಬೊಲಿಯಾಳ, ಭರತ್ ರೈ ಕಲಾಯಿ, ಚೇತನ ಶಿವಾನಂದ ಪಾಲ್ತಾಡಿ, ಹರೀಶ್ ಕಾಯರಗುರಿ ಅವರು ರಸ್ತೆ ನಿರ್ಮಾಣ ಹಾಗೂ ನಿರ್ವಹಣಾ ಕಾರ್ಯದಲ್ಲಿ ಸಕ್ರಿಯವಾಗಿ ಸಹಕರಿಸಿದರು.
ರಸ್ತೆ ನಿರ್ಮಾಣದಿಂದ ಪಾರ್ಲ–ಕಲ್ಲಗಂಡಿ ಕಾಲನಿಯ ನಿವಾಸಿಗಳಿಗೆ ಸುಗಮ ಸಂಚಾರ ಸೌಲಭ್ಯ ದೊರೆತಿದ್ದು, ಗ್ರಾಮಾಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.


