ಉಡುಪಿ : ಶ್ರೀ ಕೃಷ್ಣಮಠದಲ್ಲಿ 2026ರ ಜ. 18ರಂದು ನಡೆಯುವ ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ನಡೆಯುವ ಚತುರ್ಥ ಮುಹೂರ್ತವಾದ ಧಾನ್ಯ ಮುಹೂರ್ತವು ಕೃಷ್ಣಮಠದ ಆವರಣದಲ್ಲಿ ಡಿ.14ರ ಭಾನುವಾರ ನೆರವೇರಲಿದೆ ಎಂದು ಶೀರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ ತಿಳಿಸಿದರು.
ಈ ಕುರಿತು ಶೀರೂರು ಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 6.15ಕ್ಕೆ ಶೀರೂರು ಮಠದಲ್ಲಿ ದೇವತಾ ಪ್ರಾರ್ಥನೆ ನಡೆಯಲಿದೆ. ಬಳಿಕ ಶ್ರೀ ಅನಂತೇಶ್ವರ, ಶ್ರೀಚಂದ್ರಮೌಳೀಶ್ವರ, ಶ್ರೀಕೃಷ್ಣಮುಖ್ಯಪ್ರಾಣ, ಗರುಡ ದೇವರು ಮತ್ತು ಶ್ರೀಮಧ್ವಾಚಾರ್ಯರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದು ಎಂದರು.




ರಥಬೀದಿಯಲ್ಲಿ ಚೆಂಡೆ, ವಾದ್ಯ ಸಹಿತ ಮಂತ್ರ ಘೋಷಗಳೊಂದಿಗೆ ಚಿನ್ನದ ಪಲ್ಲಕಿಯಲ್ಲಿ ಅಕ್ಕಿಮುಡಿ ಮೆರವಣಿಗೆ ನಡೆಯಲಿದೆ. ಬಳಿಕ ಭಕ್ತರು ಶ್ರೀಕೃಷ್ಣ ಮಠದ ಬಡಗು ಮಾಳಿಗೆಗೆ ಮೆರವಣಿಗೆಯಲ್ಲಿ ಆಗಮಿಸಲಿದ್ದಾರೆ. ನಂತರ ಬಡಗುಮಾಳಿಗೆಯ ಗದ್ದುಗೆಯಲ್ಲಿ ನಾಲ್ಕು ಮುಡಿಗಳ ಮೇಲೆ ಕಿರು ಮುಡಿಯಿಟ್ಟು ಪೂಜೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶೀರೂರು ಪರ್ಯಾಯ ಸ್ವಾಗತ ಸಮಿತಿಯ ಪ್ರಮುಖರಾದ ಮಟ್ಟಾರು ರತ್ನಾಕರ ಹೆಗ್ಡೆ, ಮೋಹನ್ ಭಟ್, ಸುಪ್ರಸಾದ್ ಶೆಟ್ಟಿ, ನಂದನ್ ಜೈನ್, ಮಧುಕರ ಮುದ್ರಾಡಿ ಉಪಸ್ಥಿತರಿದ್ದರು.



