ಪುತ್ತೂರು: ಪುತ್ತೂರು ಬೈಪಾಸ್ ರಸ್ತೆ ಉಲ್ಲಾಸಂಡಿ ಸಮೀಪದ ಅಸ್ತಿತ್ವ ಬಳ್ಳ ವೈದ್ಯರೊಬ್ಬರ ಮನೆಯಲ್ಲಿ ಕಳ್ಳತನ ನಡೆದಿರುವ ಘಟನೆ ವರದಿಯಾಗಿದೆ. ಪುತ್ತೂರು ಮತ್ತು ಮೈಸೂರು ನಡುವೆ ವ್ಯದ್ಯಕೀಯ ವೃತ್ತಿ ಮಾಡುತ್ತಿರುವ ಡಾ. ವೆಂಕಟ್ರಮಣ ಭಟ್ ಅವರ ಮನೆಗೆ ಕಳ್ಳರು ನುಗ್ಗಿ ನಗದು ಹಾಗೂ ಬೆಳ್ಳಿ ದೇವರ ಮೂರ್ತಿಯನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.




ಘಟನೆ ನಡೆದ ದಿನ ಡಾ. ವೆಂಕಟ್ರಮಣ ಭಟ್ ಅವರು ಕುಟುಂಬ ಸಮೇತ ಮೈಸೂರಿಗೆ ತೆರಳಿದ್ದ ಸಂದರ್ಭ ಮನೆ ಖಾಲಿ ಇದ್ದುದನ್ನು ಗಮನಿಸಿದ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಡಿ.7ರಂದು ಅವರು ಮನೆಯಿಂದ ಹೊರಟಿದ್ದು, ಡಿ.13ರಂದು ಮನೆಗೆ ಮರಳಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.


ಮನೆಯ ಒಳಭಾಗದ ಬಾಗಿಲು ಹಾಗೂ ಅಲಮಾರಿಗಳನ್ನು ಮುರಿದು ಕಳ್ಳರು ಸುಮಾರು 1.5 ಕೆ.ಜಿ. ಬೆಳ್ಳಿಯ ದೇವರ ಮೂರ್ತಿಗಳು, ರೂ.6 ಸಾವಿರ ನಗದು ಸೇರಿದಂತೆ ಒಟ್ಟು ಸುಮಾರು ರೂ.96 ಸಾವಿರ ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಡಿ.14ರಂದು ಡಾ. ವೆಂಕಟ್ರಮಣ ಭಟ್ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.


