ಅಮಾಸೆಬೈಲು : ಕುಂದಾಪುರ ತಾಲೂಕಿನ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 05/04/2026 ರಂದು ಪಿಎಸ್ಐ ಅಶೋಕ್ ಕುಮಾರ್ ಅವರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಹೊಸಂಗಡಿ ಚೆಕ್ ಪೋಸ್ಟ್ ಬಳಿ ಅಕ್ರಮ ಜಾನುವಾರು ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.
ಚೆಕ್ ಪೋಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಬೆಳಿಗ್ಗೆ ಸುಮಾರು 5:00 ಗಂಟೆಗೆ ಹುಲಿಕಲ್ ಘಾಟಿ ಕಡೆಯಿಂದ ಬರುತ್ತಿದ್ದ KA-25 AB 6246 ಸಂಖ್ಯೆಯ ಟಾಟಾ ಇಂಟ್ರಾ ವಾಹನವನ್ನು ತಡೆದು ತಪಾಸಣೆ ನಡೆಸಿದರು.





ಈ ವೇಳೆ ವಾಹನದಲ್ಲಿ ಎರಡು ಎತ್ತುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಿಸಲಾಗುತ್ತಿರುವುದು ಪತ್ತೆಯಾಯಿತು. ವಿಚಾರಿಸಿದಾಗ ಜಾನುವಾರುಗಳನ್ನು ವಧೆಗಾಗಿ ಸಾಗಿಸುತ್ತಿರುವುದಾಗಿ ತಿಳಿದುಬಂದಿದೆ.
ಈ ಜಾನುವಾರುಗಳ ಅಂದಾಜು ಮೌಲ್ಯ ರೂ.1,00,000 ಆಗಿದ್ದು, ವಾಹನದ ಮೌಲ್ಯ ರೂ.4 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ವೇಳೆ ಟಾಟಾ ಇಂಟ್ರಾ ವಾಹನದ ಹಿಂಬದಿಯಿಂದ KA-47 A 6169 ಸಂಖ್ಯೆಯ ಬಿಳಿ ಬಣ್ಣದ ಟೊಯೋಟಾ ಎಟಿಯಾಸ್ ಕಾರು ಬರುತ್ತಿದ್ದು, ಅದು ಅಕ್ರಮ ಸಾಗಾಟಕ್ಕೆ ಬೆಂಗಾವಲು ನೀಡುತ್ತಿರುವ ಶಂಕೆ ವ್ಯಕ್ತವಾಯಿತು. ಪೊಲೀಸರು ಕಾರನ್ನು ತಡೆದಾಗ ಚಾಲಕ ಮತ್ತು ಮತ್ತೊಬ್ಬ ವ್ಯಕ್ತಿ ಓಡಿ ಪರಾರಿಯಾಗಿದ್ದು, ಇನ್ನೊಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಕಾರಿನ ಅಂದಾಜು ಮೌಲ್ಯ ರೂ.5 ಲಕ್ಷವಾಗಿದೆ.
ಪೊಲೀಸರು ಜಾನುವಾರುಗಳು, ವಾಹನಗಳು ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 08/2026ರಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣವನ್ನು ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2020ರ ಕಲಂ 4, 5, 7, 12, ಪ್ರಾಣಿಗಳಿಗೆ ಕ್ರೂರತೆ ತಡೆ ಕಾಯ್ದೆ 11(1)(d) ಹಾಗೂ ಐಎಂವಿ ಕಾಯ್ದೆ 66(1) r/w 192(A) ಅಡಿಯಲ್ಲಿ ದಾಖಲಿಸಲಾಗಿದೆ.
ಬಂಧಿತ ಆರೋಪಿಗಳನ್ನು ಮುಸ್ತಾಕ್ ಹುಸೇನ್ ಸಾಬ್ ನದಾಫ್ (29), ಸಲೀಂ ಹುಸೇನ್ ಸಾಬ್ ನದಾಫ್ (33) ಹಾಗೂ ನದೀಂ ಅಬ್ದುಲ್ ಖಾದರ್ (34) ಎಂದು ಗುರುತಿಸಲಾಗಿದ್ದು, ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.



