ಕರ್ನಾಟಕದ ಪರಪ್ಪನ ಅಗ್ರಹಾರ (ಬೆಂಗಳೂರು ಸೆಂಟ್ರಲ್) ಜೈಲಿನಲ್ಲಿರುವ ಉಗ್ರ ಜುಹಾದ್‌ ಹಮೀದ್‌ ಶಕೀಲ್‌ ಮನ್ನಾ ಸೇರಿದಂತೆ ವಿವಿಧ ಖೈದಿಗಳಿಗೆ ರಾಜಾತಿಥ್ಯ ನೀಡಲಾಗಿದೆ ಎನ್ನುವ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿಚಾರವಾಗಿ ಗೃಹ ಸಚಿವ ಜಿ. ಪರಮೇಶ್ವರ್ ಅವರು ಅಧಿಕಾರಿಗಳ ಸಭೆ ನಡೆಸಿದ್ದು, ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನೀವು ಕೊಡುವ ಅಂಕಿ-ಅಂಶಗಳ ಡೇಟಾ ನೋಡಲು ನಾನು ಬಂದಿಲ್ಲ. ರಾಷ್ಟ್ರಮಟ್ಟದಲ್ಲಿ ಇಲಾಖೆಯ ಗೌರವ ಕಳೆದಿದ್ದೀರಿ. ಹಳೇ ವೀಡಿಯೋ‌ ಎಂದು ಸಬೂಬು ಹೇಳುತ್ತೀರಿ. 2023ರಲ್ಲಾಯ್ತು, 2024ರಲ್ಲಾಯ್ತು ಅಂತ ಹೇಳ್ತೀರಿ. ಆಗ ಯಾಕಾಯ್ತು? ಅಂತ ಉತ್ತರ ಕೊಡಿ ಎಂದು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ.

ಜೈಲುಗಳಲ್ಲಿ ಶೋಧಕಾರ್ಯ ನಡೆಸಿದಾಗ ಏನು ಸಿಕ್ಕಿಲ್ಲ ಅಂತ ಹೇಳ್ತಿರಿ. ಈಗ ಅದೆಲ್ಲ ಹೇಗೆ ಒಳಗಡೆ ಹೋಯ್ತು. ನಿಮಗೆ ನಾಚಿಕೆ ಆಗೋದಿಲ್ಲವೇ.

2023ರ ಜೂನ್, ಜುಲೈನಲ್ಲಿ ಜೈಲು ಸೂಪರಿಡೆಂಟ್ ಯಾರು ಇದ್ದರು. ರೌಡಿ ವಡ್ಡ ನಾಗ ನಾನೇ ರೆಕಾರ್ಡ್ ಮಾಡಿರುವುದಾಗಿ ಪ್ರಕರಣವೊಂದರಲ್ಲಿ ಒಪ್ಪಿಕೊಂಡಿದ್ದಾನೆ. ಆತನಿಗೆ ಎರಡು ಮೊಬೈಲ್ ಹೇಗೆ ಸಿಕ್ಕಿತು ಎಂದು ಪ್ರಶ್ನೆ ಮಾಡಿದ್ದಾರೆ. ಲಿಕ್ಕರ್, ಫೋನ್, ಪೆನ್ ಕ್ಯಾಮೆರಾ ಹೇಗೆ ಹೋಯ್ತು ಎಂದ ಗೃಹ ಸಚಿವರ ಪ್ರಶ್ನೆಗೆ ಉತ್ತರ ನೀಡದೆ ಜೈಲು ಅಧಿಕಾರಿಗಳು ಮೌನವಾಗಿ ನಿಂತರು.

ನಿಷೇಧಿತ ವಸ್ತುಗಳನ್ನು ಒಳಗಡೆ ಹೋಗುವುದನ್ನು ತಡೆದರೆ ಇದೆಲ್ಲ ಆಗುವುದಿಲ್ಲ‌. ತಡೆಯಲು ನಿಮ್ಮಿಂದ ಆಗಿಲ್ಲ. ಒಂದೇ ಪ್ರವೇಶ ದ್ವಾರದಲ್ಲಿ ಏನೆಲ್ಲ ಹೋಗುತ್ತೆ, ಏನು ಹೋಗಲ್ಲ ಅನ್ನುವುದನ್ನು ಗುರುತಿಸಲು ಆಗುವುದಿಲ್ಲವೇ. ದಿಸ್ ಈಸ್ ಟೂಮಚ್. ಇದರಲ್ಲಿ ಅಧಿಕಾರಿಗಳ ಕೈವಾಡ ಇಲ್ಲವೇ ನೀವೇ ಹೇಳಿ ಎಂದು ಕೇಳಿದ್ದಾರೆ. ಮುಂದುವರಿದು ರಾಜ್ಯದ ಎಲ್ಲ ಕಾರಾಗೃಹಗಳಲ್ಲಿನ ಚಟುವಟಿಕೆಗಳನ್ನು ಸಿಸಿಟಿವಿ ಕ್ಯಾಮೆರಾ ಮೂಲಕ ಬೆಂಗಳೂರಿನಿಂದ ನಿಗಾವಹಿಸಲು ಕ್ರಮ ಕೈಗೊಳ್ಳಬೇಕು. ಕಮಾಂಡ್ ಸೆಂಟರ್ ಆಗಲೇಬೇಕು. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ಎಸಿಎಸ್‌ ತುಷಾರ್ ಗಿರಿನಾಥ್, ಡಿಜಿ ಹಾಗೂ ಐಜಿಪಿ ಸಲೀಂ ಅವರಿಗೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *