ಪುತ್ತೂರು: ಸುಮಾರು 30 ವರ್ಷಗಳ ಸೇವಾ ಅನುಭವ ಹೊಂದಿರುವ ಶಿಕ್ಷಕಿಯ ವಿರುದ್ಧ ಪುತ್ತೂರು ಶಾಸಕರು ಅನುಸರಿಸಿರುವ ವರ್ತನೆ ಸರಿಯಲ್ಲ. ಜನರಿಂದ ಆಯ್ಕೆಯಾದ ಪ್ರತಿನಿಧಿಯಾಗಿ ಶಾಸಕರು ಮಾತನಾಡಬೇಕಾದ ಭಾಷೆ ಹಾಗೂ ತೋರಬೇಕಾದ ಸಂಯಮ ಇಲ್ಲದಿರುವುದು ವಿಷಾದಕರವಾಗಿದೆ. ಶಾಸಕರ ಮಾತುಗಳಿಂದ ತಮಗೆ ನೋವಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಬಿಜೆಪಿ ಪಕ್ಷ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಸುಸಂಸ್ಕೃತ ಕುಟುಂಬದಲ್ಲಿ ಬೆಳೆದ ಪುತ್ತೂರಿನ ಶಾಸಕರ ಇತ್ತೀಚಿನ ನಡವಳಿಕೆ ಹಾಗೂ ಭಾಷೆ ನೋಡಿದರೆ ಅವರು ತಾನೊಬ್ಬ ಜನರಿಂದ ಆಯ್ಕೆಯಾದ ಶಾಸಕ ಎಂಬುದನ್ನು ಮರೆತಂತಿದೆ. ಇದರಿಂದಾಗಿ ಪುತ್ತೂರಿನಲ್ಲಿ ಹಿಂದಿನ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕಂಡುಬಂದ ಗೂಂಡಾ ಸಂಸ್ಕೃತಿಯನ್ನು ಮತ್ತೆ ಪುನಃಸ್ಥಾಪಿಸಲು ಹೊರಟಿರುವ ಅನುಭವವಾಗುತ್ತಿದೆ ಎಂದರು.
ಬಡಗನ್ನೂರು ಪಂಚಾಯತ್ ವ್ಯಾಪ್ತಿಯ ಕೊಯಿಲ ಶಾಲೆಯ ಕಾರ್ಯಕ್ರಮದಲ್ಲಿ ತಮಗೆ ಅವಮಾನವಾಗಿದೆ ಎಂದು ಸುಳ್ಳು ಮಾಹಿತಿ ನೀಡುವ ಮೂಲಕ, ಅಲ್ಲಿನ ಶಿಕ್ಷಕಿಯೊಬ್ಬರ ಮೇಲೆ ಕಾಂಗ್ರೆಸ್ ನಾಯಕರ ಎದುರೇ ಬಾಯಿಗೆ ಬಂದಂತೆ ಮಾತನಾಡಿರುವುದು ಖಂಡನೀಯ. ಒಂದು ಕಡೆ ಮಹಿಳೆಯರನ್ನು ವೇದಿಕೆಯಲ್ಲಿ ದೇವರೆಂದು ಕರೆದಾಡುವುದು, ಮತ್ತೊಂದು ಕಡೆ ಮಹಿಳೆಯರನ್ನೇ ಅವಮಾನಿಸುವುದು ಶಾಸಕರ ಮಹಿಳಾ ಗೌರವ ಕೇವಲ ವೇದಿಕೆ ಮಟ್ಟಕ್ಕೆ ಸೀಮಿತವಾಗಿದೆ ಎಂಬುದನ್ನು ತೋರಿಸುತ್ತದೆ. ಇದಕ್ಕೆ ಮುಂದಿನ ದಿನಗಳಲ್ಲಿ ಸಜ್ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಎಚ್ಚರಿಸಿದರು.

Leave a Reply

Your email address will not be published. Required fields are marked *