ಪುತ್ತೂರು: 30 ವರ್ಷದ ಹಿಂದೆ 17ರ ತರುಣನಾಗಿದ್ದು ಎತ್ತರದ ಸಪೂರ ನಿಲುವಿನ ಭಾವ ಸ್ಪಂದನ ಹೊರ ಸೂಸುವ ಹೊಳಪು ಕಂಗಳೊಂದಿಗೆ ಮೆಲುನಗೆ ಬೀರುವ ಹಸನ್ಮುಖಿ ಬಿ ದೀಪಕ್ ಕುಮಾರ್ ಅವರು ತನ್ನ ರಂಗಪ್ರವೇಶದ ಕ್ಷಣವನ್ನು 30 ವರ್ಷದ ಬಳಿಕ ಮತ್ತೊಮ್ಮೆ ಅದೇ ನೃತ್ಯಗಳನ್ನು ಯಶಸ್ವಿಯಾಗಿ ಪ್ರಸ್ತುತ ಪಡಿಸಿದ್ದಾರೆ.

ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆದ ನೃತ್ಯೋತ್ಕ್ರಮಣ ಕಾರ್ಯಕ್ರಮ ಕಲಾರಾಧಕರನ್ನು ಮಂತ್ರಮುಗ್ದಗೊಳಿಸಿದೆ. ನೃತ್ಯದ ಕೊನೆಯ ತಿಲ್ಲಾನದಲ್ಲಿ ತುಂಬಿದ ಸಭೆಯೇ ಎದ್ದು ನಿಂತು ಕರತಾಡದೊಂದಿಗೆ ಕಲೆಗೆ ಗೌರವ ನೀಡಿರುವುದು ವಿದ್ವಾನ್ ದೀಪಕ್ ಕುಮಾರ್ ಅವರ ಸಾಧನೆಗೆ ಸಿಕ್ಕ ಗೌರವವಾಗಿದೆ.


1996ರ ಜನವರಿ 12ರಂದು ಮಂಗಳೂರಿನ ಟೌನ್ ಹಾಲ್ನಲ್ಲಿ ನಡೆದ ರಂಗಪ್ರವೇಶವನ್ನು 30 ವರ್ಷಗಳ ಬಳಿಕ ಮತ್ತೆ ಅದನ್ನೇ ನೆನಪಿಸಿ ಮರುಸೃಷ್ಟಿಸುವ ಮೂಲಕ ಮತ್ತೊಮ್ಮೆ ಅವರು ಮತ್ತೆ ಹದಿನೇಳರ ತರುಣರಾಗಿ ಕಲೆಯನ್ನು ಅರ್ಪಣೆ ಮಾಡಿದರು. ವಿದ್ವಾನ್ ದೀಪಕ್ ಕುಮಾರ್ ಅವರ ರಂಗಪ್ರವೇಶಕ್ಕೆ ಹಿನ್ನೆಲೆ ನುಡಿಸಿದವರ ಪೈಕಿ ಮೃದಂಗ ವಾದನ ಮಾಡಿದ ಕರ್ನಾಟಕ ಕಲಾಶ್ರೀ ಜಿ ಗುರುಮೂರ್ತಿ ಬೆಂಗಳೂರು ಅವರು ಮತ್ತೊಮ್ಮೆ ಮೃದಂಗ ನುಡಿಸಿದರು.

ಅದೇ ರೀತಿ ಅಂದು ನೃತ್ಯದ ಅಮೂಲ್ಯ ಕ್ಷಣಗಳನ್ನು ಸೆರಹಿಡಿದ ಯಜ್ಞ ಮಂಗಳೂರು ಅವರು ನೃತ್ಯದ ಕ್ಷಣಗಳನ್ನು ಮತ್ತೊಮ್ಮೆ ಕ್ಯಾಮೆರಾದಲ್ಲಿ ಸೆರೆ ಹಿಡಿದರು. ದೀಪಕ್ ಕುಮಾರ್ ಅವರ ನೃತ್ಯ ಗುರುಗಳಾದ ಡಾ. ವೀಣಾ ಮೂರ್ತಿ ವಿಜಯ್ ಬೆಂಗಳೂರು ಮತ್ತು ವಿದುಷಿ ರಾಜಶ್ರೀ ಉಳ್ಳಾಲ ಮಂಗಳೂರು, ವಿದ್ವಾನ್ ಉಳ್ಳಾಲ್ ಮೋಹನ್ ಕುಮಾರ್ ಅವರ ಪುತ್ರಿ ರಾಜಶ್ರೀ ಉಳ್ಳಾಲ್ ಸಹಿತ ಪುತ್ತೂರಿನ ಅನೇಕ ಹಿರಿಯ, ಕಿರಿಯ ನೃತ್ಯಗುರುಗಳು, ಗಣ್ಯರು ಕಾರ್ಯಕ್ರಮದಲ್ಲಿ ಸಾಕ್ಷಿಯಾದರು. ನೃತ್ಯ ಗುರು ಡಾ. ವೀಣಾ ಮೂರ್ತಿ ವಿಜಯ್ ಬೆಂಗಳೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ನೇರವಾಗಿ ನೃತ್ಯ ಕಾರ್ಯಕ್ರಮ ನಡೆಯಿತು.





ರಂಗ್ರಪವೇಶದ ಸಂದರ್ಭ ಗುರು ವಿದುಷಿ ಶ್ರೀಮತಿ ನರ್ಮದಾ ಅವರ ನಿದೇರ್ಶನದಲ್ಲಿ ಖಚಿತ ಹಸ್ತಮುದ್ರೆ, ಆಕರ್ಷಕ ಅಡುವುಗಳ ಮೂಲಕ ಪ್ರಾರಂಭದಲ್ಲಿ ದೇವರು, ಭೂದೇವಿ, ಗುರುಗಳು ಹಾಗೂ ಸಭಾಸದನಲ್ಲಿ ನೆರೆದಿದ್ದ ಪ್ರೇಕ್ಷಕರಿಗೂ ಸವಿನಯವಾಗಿ ನೃತ್ಯದ ಮೂಲಕ ವಂದನೆ ಸಲ್ಲಿಸಿದರು. ಖಂಡತ್ರಿಪುಟದಲ್ಲಿ ಸಾಂಪ್ರದಾಯಿಕ `ಅಲಾರಿಪು’ವನ್ನು ಖಚಿತ ಹಸ್ತಮುದ್ರೆ, ಆಕರ್ಷಕ ಅಡವುಗಳ ಸುಂದರ ಅಭಿವ್ಯಕ್ತಿಯಲ್ಲಿ ಪ್ರಾರ್ಥನಾ ರೂಪದ ನೃತ್ಯವನ್ನು ಅರ್ಪಿಸಿದರು. ಬಳಿಕ ನಾಟರಾಗ ಆದಿತಾಳದಲ್ಲಿ ಆನಂದ ನರ್ತನ ಮಾಡಿದರು.

ದೀಪಕ್ ಕುಮಾರ್ ಅವರ ಜೀವನದ ಸುಂದರ ಮತ್ತು ಕ್ಲಿಷ್ಟಕರ ಜತಿಸ್ವರದಲ್ಲಿ ಒಂದಾದ ಅಬೋಗಜತಿಸ್ವರದಲ್ಲಿ ತೋಡಿರಾಗ ಆದಿತಾಳದಲ್ಲಿ ‘ಆದಿಶಿವನೆ’ ಎಂಬ ಶಿವಸ್ತುತಿಯಲ್ಲಿ ಸುಮಾರು ಅರ್ಧ ಗಂಟೆಯ ‘ವರ್ಣ’ದಲ್ಲಿ ಶಿವನ ಸಂಪೂರ್ಣ ಚಿತ್ರಣ ಮುಂದಿಟ್ಟರು. ಬಳಿಕ ತನ್ನದೇ ನಿರ್ದೇಶನದ ಯಮನ್ ಕಲ್ಯಾಣಿ ಮಿಶ್ರಬಾವು ತಾಳದಲ್ಲಿ ಶ್ರೀರಾಮಚಂದ್ರ ಭಜನ್ ನೃತ್ಯ, ನೃತ್ಯೋತ್ಕøಮಣದ ಅಂತಿಮ ಭಾಗದಲ್ಲಿ ವೃತ್ತ ಪ್ರಮುಖವಾದ ‘ತಿಲ್ಲಾನ’ವನ್ನು ಧನುಶ್ರೀ ರಾಗ-ಆದಿತಾಳದಲ್ಲಿ ಅಪೂರ್ವ ಜತಿಗಳ ಪ್ರದರ್ಶನದೊಂದಿಗೆ ನೃತ್ಯ ರಸಧಾರೆಯನ್ನು ಹರಿಸಿದರು. ಈ ವೇಳೆ ಅವರು ಇಂದಿನ ದಿನ ಶುಭ ದಿನವು ಎಂಬ ಹಾಡನ್ನು ಒಮ್ಮೆ ಸ್ತಬ್ದಗೊಳಿಸಿ ಹಸ್ತಮುದ್ರೆಯಲ್ಲೇ 30 ವರ್ಷದ ಅಂದಿನ ದಿನವು ಶುಭದಿನವೆಂದು ನೆನಪಿಸಿ ಮತ್ತೆ ಹಾಡಿನೊಂದಿಗೆ ನೃತ್ಯ ಮುಂದುವರಿಸಿದರು. ಈ ವೇಳೆ ಸಭೆಯ ತುಂಬೆಲ್ಲಾ ನೃತ್ಯದ ಹೆಜ್ಜೆಗೆ ಸರಿಯಾಗಿ ಕರತಾಡ ಕೇಳಿ ಬಂತು. ಕೊನೆಗೆ ಇಡಿ ಸಭೆಯೇ ಎದ್ದು ನಿಂತು ಕಲೆಗೆ ಗೌರವ ನೀಡಿರುವುದು ವಿಶೇಷವಾಗಿತ್ತು. ಹಿಮ್ಮೇಳದಲ್ಲಿ ನಟುವಾಂಗ ಮತ್ತು ಹಾಡುಗಾರಿಕೆ ಮತ್ತು ನಟುವಾಂಗದಲ್ಲಿ ದೀಪಕ್ ಕುಮಾರ್ ಅವರ ಪತ್ನಿ ವಿದುಷಿ ಪ್ರೀತಿಕಲಾ ಅವರು ಸಾತ್ ನೀಡಿದರು. ಮೃದಂಗದಲ್ಲಿ ವಿದ್ವಾನ್ ಜಿ ಗುರುಮೂರ್ತಿ ಬೆಂಗಳೂರು, ಕೊಳಲಿನಲ್ಲಿ ಕು.ಮೇಧಾ ಉಡುಪ ಮಂಗಳೂರು, ಪಿಟೀಲಿನಲ್ಲಿ ಕು.ತನ್ಮಯಿ ಉಪ್ಪಂಗಳ ಅವರು ಸಹಕರಿಸಿರು.


ನೃತ್ಯ ಗುರುಗಳಾದ ಡಾ. ವೀಣಾ ಮೂರ್ತಿ ವಿಜಯ್ ಬೆಂಗಳೂರು ಅವರು ಮಾತನಾಡಿ ನೃತ್ಯ ಒಂದು ತಪ್ಪಸ್ಸು, ಅದನ್ನು ತನ್ನಲ್ಲಿ ಅಳವಡಿಸಿಕೊಂಡ ದೀಪಕ್ ಬೆಂಗಳೂರಿಗೆ ಬರಬೇಕಾದರೆ ಬಹಳ ಸಣ್ಣ ಹುಡುಗ. ಆತನ ನಿಷ್ಠೆ ಆತನ ಸಾಧನೆಗೆ ಕಾರಣವಾಗಿದೆ. ಆತ ಕಲಾ ಪರಂಪರಡಯನ್ನು ಚೆನ್ನಾಗಿ ಕಾಯ್ದುಕೊಂಡ ಶಿಷ್ಯನಾಗಿ, ಗುರುವಾಗಿ ಮೂಡಿದ್ದಾನೆ. ನೃತ್ಯದ ವಿದ್ಯಾರ್ಥಿಗಳು ಅವನ ಹಾಗೆ ನೃತ್ಯ ಮಾಡಬೇಕು. ಗುರುಗಳ ಮುಂದೆ ನೃತ್ಯ ಒಪ್ಪಿಸುವುದು ಬೇರೆ. ಮೂರು ವರ್ಷದ ಬಳಿಕ ಅದನ್ನು ಮತ್ತೆ ರಸೋನ್ಮತಿ ಮಾಡುವುದು ಕಷ್ಟ. ಅದರೆ ಇಂತಹ ಕರ್ಮಯೋಗಿಗಳಿಂದ ಅದು ಸಾಧ್ಯವಾಗಿದೆ ಎಂದರು.

ಅಭ್ಯಾಗತರಾಗಿ ಭಾಗವಹಿಸಿದ ವಿದುಷಿ ರಾಜಶ್ರೀ ಉಳ್ಳಾಲ ಅವರು ಮಾತನಾಡಿ ಗುರು ಉಳ್ಳಾಲ ಮೋಹನ್ ಅವರ ಆರೋಗ್ಯದ ತೊಂದರೆ ಇದ್ದರಿಂದ ನಾನು ಅವರ ಪರವಾಗಿ ದೀಪಕ್ಗೆ ಆಶೀರ್ವಾದ ನೀಡುತ್ತಿದ್ದೇನೆ. ಗುರು ಕೀರ್ತಿಶೇಷ ನರ್ಮದಾ ಅವರು 30 ವರ್ಷಗಳ ಹಿಂದೆ ಒಂದು ಶಿಲ್ಪವನ್ನಾಗಿ ಮಾಡಿದ್ದರ ಪರಿಣಾಮ ಇವತ್ತು ದೀಪಕ್ ಅವರ ನೃತ್ಯ ಇನ್ನಷ್ಟು ಮೆರುಗು ನೀಡಿದೆ. ಇದರಲ್ಲಿ ಪ್ರಮುಖ ಪಾತ್ರ ಅವರ ತಂದೆ ತಾಯಿಯರದ್ದು. ಗಂಡು ಮಕ್ಕಳಾಗಿದ್ದು ಅವರಿಗೆ ನೃತ್ಯ ಕಲಿಸುವ ಮನಸ್ಸು ಮಾಡಿದು ತಂದೆ ತಾಯಿಯರಿಗೆ ವಂದನೆ ಸಲ್ಲಿಸಬೇಕು. ಇವತ್ತು ದೀಪಕ್ ತಾನೊಬ್ಬ ಗುರುವಾಗಿ ಅನೇಕ ಗುರುಗಳನ್ನು ಸೃಷ್ಟಿಸಿದ್ದಾರೆ. ಅವರ ಹೊಸ ಹೊಸ ಆಲೋಚನೆಯಿಂದ ಭರತನಾಟ್ಯಕ್ಕೆ ಇನ್ನಷ್ಟು ಮೆರುಗು ಬಂದಿದೆ ಎಂದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸದಸ್ಯೆ ದಂತ ವೈದ್ಯೆ ಡಾ ಆಶಾ ಅಮ್ಮಂಕಲ್ಲು ಅವರು ಮಾತನಾಡಿ ವಿದ್ವಾನ್ ದೀಪಕ್ ಕುಮಾರ್ ಅವರು ಅಪರೂಪದ ಸಾಧನೆಯನ್ನು ಪ್ರದರ್ಶನ ಮಾಡಿರುವುದು ಸಂತಸದ ವಿಚಾರ. ಅವರು ಕೇವಲ
ಕಲಾವಿದರಾಗಿ ಮಾತ್ರವಲ್ಲ ಗುರುಗಳಾಗಿ ಸಾವಿರಾರು ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದಾರೆ. ಹೊಸ ಆಲೋಚನೆಯಿಂದ ಭರತನಾಟ್ಯ ವೈಭವನ್ನು ಉನ್ನತ ಮಟ್ಟಕ್ಕೆ ಏರಿಸಿದ್ದಾರೆ.ಅವರ ಶ್ರಮ, ನಿಷ್ಠೆ, ಜವಾಬ್ದಾರಿ ಅವರ ಸಾಧನೆಗೆ ಸಾಕ್ಷಿಯಾಗಿದೆ ಎಂದರು.
ವಿದ್ವಾನ್ ದೀಪಕ್ ಕುಮಾರ್ ಅವರು ಮಾತನಾಡಿ ಪುತ್ತೂರು ಒಂದು ರೀತಿಯಲ್ಲಿ ನನ್ನ ಮನೆ. ನಾನು ರಂಗ ಪ್ರವೇಶ ಮಾಡಿದ್ದು ಮಂಗಳೂರಿನಲ್ಲಿ. 30 ವರ್ಷದ ಬಳಿಕವೂ ಅದನ್ನು ಮಂಗಳೂರಿನಲ್ಲೇ ಪ್ರಸ್ತುತಪಡಿಸುವಂತೆ ನನ್ನಲ್ಲಿ ಕೇಳಿದವರಿದ್ದಾರೆ. ಆದರೆ ನನ್ನ ಕಲಾ ಶಾಲೆಯನ್ನು ಬೆಳೆಸಿದ್ದು ಪುತ್ತೂರು. ಹಾಗಾಗಿ ಇವತ್ತು ನನ್ನ ಗುರುಗಳಿಗೆ ಮತ್ತೊಮ್ಮೆ ಅರ್ಪಣೆ ಮಾಡುತ್ತಿದ್ದೇನೆ ಎಂದರು.
ನೃತ್ಯ ಪ್ರಸ್ತುತಿಯ ನಡುವೆ ಕಲಾ ಶಾಲೆಯ ವಿದ್ಯಾರ್ಥಿಗಳು ರಚಿಸಿದ ದೀಪಕ್ ಕುಮಾರ್ ಅವರ ನೃತ್ಯ ವಿದ್ಯಾರ್ಥಿ ಜೀವನದ ಸಾಧನೆಯ ಕುರಿತು ಚಿತ್ರಣವನ್ನು ಪ್ರಾಜೆಕ್ಟರ್ ಮೂಲಕ ಪ್ರಸಾರ ಮಾಡಲಾಯಿತು.
ಬಳಿಕ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಲೋಕೇಶ್ ಬನ್ನೂರು ಅವರನ್ನು ಗೌರವಿಸಲಾಯಿತು. ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಂಚಾಲಕಿ ಶಶಿಪ್ರಭಾ, ವಿದ್ವಾನ್ ದೀಪಕ್ ಕುಮಾರ್, ವಿದ್ವಾನ್ ಗಿರೀಶ್ ಕುಮಾರ್, ವಿದುಷಿ ಪ್ರೀತಿಕಲಾ, ಕು| ಮಾತಂಗಿ ಅವರು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭ ಲೋಕೇಶ್ ಬನ್ನೂರು ಅವರ ತಾಯಿ ವೇದಾವತಿ, ಪತ್ನಿ ಜಯಶೀಲ, ಪುತ್ರ ಹಿಮನೀಶ್ ಗೌಡ ಕೆ ಜೊತೆಗಿದ್ದರು.
ಹಿರಿಯ ಕಿರಿಯ ವಿದ್ಯಾರ್ಥಿಗಳಿಂದ ವಿದ್ವಾನ್ ದೀಪಕ್ ಕುಮಾರ್ ಅವರಿಗೆ ಭರತನಾಟ್ಯ ನೃತ್ಯಕ್ಕೆ ಸಂಬಂಧಿಸಿದ ಹಾರವೊಂದನ್ನು ಕಾಣಿಕೆಯಾಗಿ ಸಮರ್ಪಣೆ ಮಾಡಿದರು.
ಮಾ| ಶೌರ್ಯಕೃಷ್ಣ ಶಂಖನಾದ ಮೊಳಗಿಸಿದರು. ಶ್ರೀ ಮೂಕಾಂಬಿಕಾ ಕಲ್ಚರ್ ಅಕಾಡೆಮಿಯ ನೃತ್ಯಗುರು ವಿದುಷಿ ಪ್ರೀತಿಕಲಾ ಓಂಕಾರ ಪಟಿಸಿದರು.
ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯದ ಜೀವಾಳವೇ ನಟುವಾಂಗ. ನೃತ್ಯದಲ್ಲಿ ನೃತ್ಯದ ಅಡವು, ಜತಿಗಳಿಗೆ ಅನುಗುಣವಾಗಿ ರೂಪಿಸಿಕೊಳ್ಳಬೇಕು. `ನಟುವಾಂಗ ಕಲಾವಿದರಿಗೆ ತಾಳದ ಜ್ಞಾನ ಬಹಳ ಮುಖ್ಯ. ಇಡೀ ಕಾರ್ಯಕ್ರಮದುದ್ದಕ್ಕೂ ನಟುವಾಂಗ ಕಲಾವಿದರ ಗಮನ ಪೂರ್ತಿ ನೃತ್ಯ ಕಲಾವಿದರ ಮೇಲೆಯೇ ಇರಬೇಕು. ನೃತ್ಯ ಗೊತ್ತಿದ್ದರೆ ನಟುವಾಂಗ ನುಡಿಸುವುದು ತುಂಬ ಸುಲಭ. ಈ ನಿಟ್ಟಿನಲ್ಲಿ ವಿದ್ವಾನ್ ದೀಪಕ್ ಕುಮಾರ್ ಅವರ ಪತ್ನಿ ವಿದುಷಿ ಪ್ರೀತಿಕಲಾ ಅವರು ಸಂಗೀತ ಮತ್ತು ನೃತ್ಯವನ್ನು ಕರಗತಗೊಳಿಸಿದ್ದಾರೆ. ಹಾಗಾಗಿ ನಟುಂವಾಗ ನುಡಿಸುವುದು ಕಷ್ಟವೇನಲ್ಲ. ಆದರೆ ಬಹುತೇಕ ಕಡೆ ಹಾಡುಗಾರಿಕೆಯಲ್ಲಿ ಮತ್ತು ನಟುವಾಂಗ ನುಡಿಸುವಲ್ಲಿ ಪ್ರತ್ಯೇಕ ಗುರುಗಳಿರುತ್ತಾರೆ. ಆದರೆ ಇಲ್ಲಿ ಅವೆರಡನ್ನೂ ಏಕಕಾಲದಲ್ಲಿ ನಿಭಾಯಿಸಿದ ವಿದುಷಿ ಪ್ರೀತಿಕಲಾ ಅವರು ದಾಖಲೆ ಮೆರೆದಿದ್ದಾರೆ.
ಕಲಾಶಾಲೆಯ ವಿದ್ಯಾರ್ಥಿಗಳು ಸಭಾಂಗಣದ ಪ್ರವೇಶ ದ್ವಾರದಲ್ಲಿ ಗುರು ದೀಪಕ್ ಕುಮಾರ್ ಅವರ ಸಾಧನೆಯನ್ನು ಬಿಂಬಿಸಿದ ಹಲವು ಚಿತ್ರಗಳನ್ನು ಪ್ರದರ್ಶಿಸಿದರು.
