ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕಟಾರ ಪ್ರದೇಶದ ದಾರಂದಕುಕ್ಕು, ಕಟಾರ ಹಾಗೂ ಆನಡ್ಕ ಸೇರುವ ಮೂರು ರಸ್ತೆ ಮಧ್ಯಭಾಗದಲ್ಲಿ ವಾಮಾಚಾರ ನಡೆಸಿರುವ ಶಂಕೆಗೆ ಕಾರಣವಾದ ವಸ್ತುಗಳು ಜನವರಿ 18ರ ಬೆಳಿಗ್ಗೆ ಪತ್ತೆಯಾಗಿವೆ.





ಬಾಳೆ ಎಲೆಯ ಮೇಲೆ 25ಕ್ಕೂ ಅಧಿಕ ಲಿಂಬೆ ಹಣ್ಣಿನ ತುಂಡುಗಳು, ನಾಲ್ಕೈದು ಬತ್ತಿಗಳು ಸುತ್ತಲೂ ಸುರಿದ ಹೊದ್ದು ಹಾಗೂ ಒಡೆದ ತೆಂಗಿನಕಾಯಿಗಳು ಅರಣ್ಯ ಜಾಗದಲ್ಲಿ ಕಂಡುಬಂದಿವೆ. ರಾತ್ರೋರಾತ್ರಿ ಯಾರೋ ಮೂರು ಮಾರ್ಗ ಸೇರುವ ಸ್ಥಳದಲ್ಲಿ ವಾಮಾಚಾರ ಪ್ರಯೋಗ ನಡೆಸಿರಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.


ಬೆಳಿಗ್ಗೆ ಹಾಲಿನ ಡೈರಿಗೆ ತೆರಳುತ್ತಿದ್ದ ಸ್ಥಳೀಯರು ಮೊದಲು ಇದನ್ನು ಗಮನಿಸಿದ್ದು, ನಂತರ ಕುತೂಹಲದಿಂದ ಸ್ಥಳಕ್ಕೆ ಹೆಚ್ಚಿನ ಜನರು ಸೇರಿದ್ದರು. ಘಟನೆಯಿಂದಾಗಿ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.


