ಪುತ್ತೂರು: ಯುಆರ್ ಪ್ರಾಪರ್ಟಿಸ್ ಸಂಸ್ಥೆಯ ಮಾಲಕರಾದ ಉಜ್ವಲ್ ಪ್ರಭು ಅವರ ಕನಸಿನ ಯೋಜನೆಯಾದ ‘ಶ್ರೀಮಾ ಹೈಟ್ಸ್’ ಅಪಾರ್ಟೆಂಟ್ ನಿರ್ಮಾಣಕ್ಕೆ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಭಾನುವಾರ ಭಕ್ತಿಭಾವದಿಂದ ನೆರವೇರಿತು.
ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಅರ್ಚಕರಾದ ಉದಯ ಭಟ್ ಅವರು ಶಿಲಾನ್ಯಾಸ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಉಜ್ವಲ್ ಪ್ರಭು ಅವರೊಂದಿಗೆ ಪತ್ನಿ ರಕ್ಷಾ ಉಜ್ವಲ್ ಪ್ರಭು, ಮಗಳು ಶ್ರೀಮಾ, ಪುತ್ರ ಸಿಯಾನ್ ಹಾಗೂ ಕುಟುಂಬ ಸದಸ್ಯರು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಳೆದ 11 ವರ್ಷಗಳಿಂದ 19 ಲೇಔಟ್‌ಗಳನ್ನು ಯಶಸ್ವಿಯಾಗಿ ರೂಪಿಸಿ, 2025ರ ಡಿ.26ರಂದು ಬೆದ್ರಾಳದಲ್ಲಿ ‘ಶ್ರೀಮಾ ಥೀಂ ಪಾರ್ಕ್’ ಲೋಕಾರ್ಪಣೆ ಮಾಡುವ ಮೂಲಕ ಜನಮೆಚ್ಚುಗೆ ಪಡೆದ ಯುಆರ್ ಪ್ರಾಪರ್ಟಿಸ್ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಪುತ್ತೂರು ನಗರದ ಜಿಲ್‌ಎಲ್ ವನ್ ಮಾಲ್ ಪಕ್ಕದಲ್ಲಿ ‘ಶ್ರೀಮಾ ಹೈಟ್ಸ್’ ಅಪಾರ್ಟೆಂಟ್ ನಿರ್ಮಾಣವಾಗಲಿದೆ.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಯುಆರ್ ಪ್ರಾಪರ್ಟಿಸ್ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತಮ್ಮದೇ ಗುರುತನ್ನು ಮೂಡಿಸಿದೆ. 14 ಮಹಡಿಗಳ ಈ ಅಪಾರ್ಟೆಂಟ್‌ನಲ್ಲಿ 52 ವಿನೂತನ ಶೈಲಿಯ ಮನೆಗಳನ್ನು ಜನತೆಗೆ ಪರಿಚಯಿಸುತ್ತಿದ್ದಾರೆ. ಮಹಾಲಿಂಗೇಶ್ವರ ದೇವರ ಅನುಗ್ರಹ ಉಜ್ವಲ್ ಪ್ರಭು ಅವರ ಮೇಲಿರಲಿ ಎಂದು ಹಾರೈಸಿದರು.
ಖ್ಯಾತ ವಕೀಲ ಮಹೇಶ್ ಕಜೆ ಮಾತನಾಡಿ, ಬದ್ಧತೆ ಮತ್ತು ಸಾಹಸ ಇದ್ದರೆ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಉಜ್ವಲ್ ಪ್ರಭು ಉದಾಹರಣೆ ಎಂದರು. ಒಂದೇ ಸಂಕೀರ್ಣದಲ್ಲಿ ಜನರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಯೋಜನೆ ಇದಾಗಿದೆ ಎಂದು ಅಭಿಪ್ರಾಯಪಟ್ಟರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಪುತ್ತೂರಿನ ಹೃದಯ ಭಾಗದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗಲಿರುವ ಈ ಸಂಕೀರ್ಣವು ನಗರದ ಅಭಿವೃದ್ಧಿಗೆ ಹೊಸ ಮೈಲಿಗಲ್ಲಾಗಲಿದೆ ಎಂದರು.

ಉಜ್ವಲ್ ಪ್ರಭು ಮಾತನಾಡಿ, ‘ಶ್ರೀಮಾ ಹೈಟ್ಸ್’ ಪುತ್ತೂರಿಗೆ ಹೊಸ ಪ್ರಯೋಗವಾಗಿದ್ದು, 14 ಮಹಡಿಗಳಲ್ಲಿ 52 ಐಷಾರಾಮಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಸ್ವಿಮ್ಮಿಂಗ್ ಪೂಲ್, ಪಾರ್ಟಿ ಏರಿಯಾ, ಜಾಗಿಂಗ್ ಟ್ರ್ಯಾಕ್, ಮಕ್ಕಳ ಆಟದ ಮೈದಾನ, ಕ್ಲಬ್ ಹೌಸ್, ಜಿಮ್, ಯೋಗ ಕೇಂದ್ರ, ಇನ್‌ಡೋರ್ ಗೇಮ್ಸ್, ಹಿರಿಯ ನಾಗರಿಕರ ವಿಶ್ರಾಂತಿ ಕೊಠಡಿ ಸೇರಿದಂತೆ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳು ಇರಲಿವೆ. ನಿರ್ಮಾಣ ಕಾರ್ಯವನ್ನು ಖ್ಯಾತ ಯುಪಿಕೆ ನಾಯರ್ ಕನ್‌ಸ್ಟ್ರಕ್ಷನ್ ಸಂಸ್ಥೆಯ ಸೂರಜ್ ನಾಯರ್ ಅವರಿಗೆ ವಹಿಸಲಾಗಿದೆ ಎಂದರು.
ವಿಶಾಲ ಪ್ರಕೃತಿ ರಮಣೀಯ ವಾತಾವರಣದಲ್ಲಿ ಆಧುನಿಕ ಸ್ಪರ್ಶದೊಂದಿಗೆ ನಿರ್ಮಾಣವಾಗಲಿರುವ ‘ಶ್ರೀಮಾ ಹೈಟ್ಸ್’ ಪುತ್ತೂರಿನ ಅತಿದೊಡ್ಡ ಐಷಾರಾಮಿ ಅಪಾರ್ಟೆಂಟ್ ಸಂಕೀರ್ಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಕಾರ್ಯಕ್ರಮದಲ್ಲಿ ಡಾ. ಪ್ರಸಾದ್ ಭಂಡಾರಿ, ಸಂತೋಷ್ ಕುಮಾರ್ ನಳೀಲು, ಪ್ರಸನ್ನ ಶೆಟ್ಟಿ ಸಿಝರ್, ಉದಯ ಪ್ರಭು, ರಾಘವೇಂದ್ರ ಮಯ್ಯ, ಎಸ್.ಆರ್. ರಂಗಮೂರ್ತಿ, ಎಸ್. ಅಪ್ಪಯ್ಯ ಮಣಿಯಾನಿ, ಜೀವನ್ದಾರ್ ಜೈನ್ ಸೇರಿದಂತೆ ಅನೇಕ ಗಣ್ಯರು, ಬಂಧುಗಳು ಹಾಗೂ ಸ್ನೇಹಿತರು ಉಪಸ್ಥಿತರಿದ್ದು ಶುಭ ಹಾರೈಸಿದರು.

Leave a Reply

Your email address will not be published. Required fields are marked *