ಕಡಬ: ಲೀಸ್ ಆಧಾರದಲ್ಲಿ ಪಡೆದುಕೊಂಡಿದ್ದ ಕೃಷಿ ಭೂಮಿಗೆ ಅಕ್ರಮವಾಗಿ ಪ್ರವೇಶಿಸಿ ಆಸ್ತಿ ಹಾನಿ ಉಂಟುಪಡಿಸಿದ ಆರೋಪದ ಮೇರೆಗೆ ದಂಪತಿಗಳ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





ದೂರುದಾರರಾದ ಎನ್.ಕೆ. ಮೊಹಮ್ಮದ್ ಜಸೀರ್ ಅವರು ಕೋಡಿಂಬಾಳ ಗ್ರಾಮದ ಸರ್ವೆ ನಂ. 285/1ರಲ್ಲಿ ಇರುವ ಸುಮಾರು 1.80 ಎಕರೆ ಅಡಿಕೆ ಮತ್ತು ತೆಂಗಿನ ತೋಟವನ್ನು ಲೀಸ್ ಆಧಾರದಲ್ಲಿ ಪಡೆದುಕೊಂಡಿದ್ದಾರೆ. ಅವರ ದೂರಿನ ಪ್ರಕಾರ, 2025ರ ಅಕ್ಟೋಬರ್ 18ರಂದು ಮಧ್ಯಾಹ್ನ 12:15ರ ಸುಮಾರಿಗೆ ಮಹಮ್ಮದ್ ಹರೀಶ್ ಮತ್ತು ಜುಬೈದ ಅವರು ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.


ಇದಾದ ಬಳಿಕ ಅಕ್ಟೋಬರ್ 19ರ ರಾತ್ರಿ ವೇಳೆ ಜೆಸಿಪಿ ಯಂತ್ರದೊಂದಿಗೆ ತೋಟಕ್ಕೆ ನುಗ್ಗಿ ಅಲ್ಲಿ ಅಳವಡಿಸಲಾಗಿದ್ದ ಕಾಂಕ್ರೀಟ್ ಪೈಪುಗಳನ್ನು ಹಾನಿಗೊಳಪಡಿಸಿರುವುದಾಗಿ ದೂರುದಲ್ಲಿ ಉಲ್ಲೇಖಿಸಲಾಗಿದೆ. ಈ ಕೃತ್ಯದಿಂದ ಸುಮಾರು ₹25,000ರಷ್ಟು ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.
ಘಟನೆ ಸಂಬಂಧ ಕಡಬ ಪೊಲೀಸರು ಫೆಬ್ರವರಿ 25, 2026ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 329(3), 324(4) ಮತ್ತು 3(5)ರಡಿ ಮೊಕದ್ದಮೆ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

