ಬಾಗಲಕೋಟೆ: ಫಸಲ್‌ ಭೀಮಾ ಯೋಜನೆ ಬೆಳೆ ವಿಮೆಯಲ್ಲಿ 30 ಕೋಟಿ ರೂ.ಗೂ ಅಧಿಕ ಹಣ ಲೂಟಿ ಹೊಡೆದ 11 ಜನರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.

ಈ ಸಂಬಂಧ ಮುಧೋಳ ಸಹಾಯಕ ಕೃಷಿ ನಿರ್ದೇಶಕ ಸಿದ್ದಲಿಂಗೇಶ ದೊಡ್ಡಮನಿ ಎಂಬುವವರು ದೂರು ನೀಡಿದ್ದು, ದೂರಿನ ಆಧಾರದ ಮಾ.10ರಂದು ಮೇಲೆ ಮೆಟಗುಡ್ಡ ಗ್ರಾಮದ ಕಲ್ಲಪ್ಪ ಹುಣಸೀಕಟ್ಟಿ, ಶ್ರೀನಿವಾಸ ಪಾಟಿಲ್, ಕಲ್ಮೇಶ್ ಜುನ್ನೂರ, ಶ್ರೀನಿವಾಸ ಹುಣಸೀಕಟ್ಟಿ, ರಮೇಶ್ ಹುಣಸೀಕಟ್ಟಿ, ಪ್ರಶಾಂತ ಕೋಮಾರ, ಶ್ರೀಕಾಂತ ಹಲಗಲಿ, ಇನ್ಶುರೆನ್ಸ್ ಉದ್ಯೋಗಿಗಳಾದ ಯಶವಂತ, ರಾಕೇಶ್, ಪ್ರಕಾಶ್, ಅನಿಲ್ ವಿರುದ್ಧ ಬಾಗಲಕೋಟೆ ಜಿಲ್ಲೆಯ ಮುಧೋಳ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಬೆಳೆ ವಿಮೆ ಅಕ್ರಮದ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಅನಾಮಧೇಯ ಪತ್ರವೊಂದು ಬಂದಿತ್ತು. ಪತ್ರದ ಆಧಾರದ ಮೇಲೆ ಜಮಖಂಡಿ ಎಸಿ ಅವರು ಮುಧೋಳ ಕೃಷಿ ಅಧಿಕಾರಿಗೆ ನಿರ್ದೇಶನ ನೀಡಿದ್ದು, ಆ ಮೇರೆಗೆ ಮುಧೋಳ ಕೃಷಿ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ದೊಡಮನಿ ಅವರು ದೂರು ನೀಡಿದ್ದಾರೆ. ದೂರಿನಲ್ಲಿ, ಬೆಳೆವಿಮೆ ಹೆಸರಲ್ಲಿ ಕೇಂದ್ರ ಸರ್ಕಾರದ ರೈತಸ್ನೇಹಿ ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡಿದ್ದು, ಕಳೆದ ಐದು ವರ್ಷದಿಂದ ವಂಚನೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಆರೋಪಿಗಳು ಜಮೀನುಗಳಲ್ಲಿ ಕಡಿಮೆ ಜಾಗದಲ್ಲಿ ಬೆಳೆ ಬೆಳೆಯುತ್ತಿದ್ದರು. ಪಾಲಿಸಿಯಲ್ಲಿ ಹೆಚ್ಚು ಜಾಗ ಎಂದು ದಾಖಲಿಸುತ್ತಿದ್ದರು. ಬಳಿಕ ಬೆಳೆ ಹಾಳಾಗಿದೆ ಎಂದು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದರು. ಸರ್ಕಾರದಿಂದ ಜಮೆ ಆಗುವ ಹಣದಲ್ಲಿ ಕಂಪನಿಯ ಕೆಲ ಮಧ್ಯವರ್ತಿಗಳು ಹಾಗೂ ಜಮೀನಿನ ಮಾಲೀಕರು ಸಮಾನವಾಗಿ ಹಂಚಿಕೆ ಮಾಡಿಕೊಳ್ಳುತ್ತಿದ್ದರು. ಆರೋಪಿತರೆಲ್ಲ ಕಳೆದ ಐದು ವರ್ಷದಿಂದ ಅಂದರೆ 2020-21ರಿಂದ ನಿರಂತರವಾಗಿ ವಂಚಿಸಿದ್ದಾರೆ. ಪ್ರಸಕ್ತ ವರ್ಷ ಮೆಕ್ಕೆಜೋಳ ಬೆಳೆಯದೇ 28.51 ಲಕ್ಷ ರೂ. ವಿಮೆ ಹಣ ವಂಚನೆ ಮಾಡಿದ್ದು, ಇದೇ ರೀತಿ 2020-21ರಿಂದ ಇಲ್ಲಿಯವರೆಗೆ ಬರೋಬ್ಬರಿ 30.28 ಕೋಟಿ ರೂ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *