ಪುತ್ತೂರು: ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೊಲ್ಲಾಡು–ಹೊಸಬೆಟ್ಟು ಪ್ರದೇಶಕ್ಕೆ ರಸ್ತೆ ಸೌಲಭ್ಯ ಇಲ್ಲದ ಕಾರಣ ಅಲ್ಲಿನ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆ ನಿರ್ಮಿಸಿಕೊಡದಿದ್ದರೆ ಬೆಳ್ತಂಗಡಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ಎಚ್ಚರಿಸಿದರು.





ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮಂತಡ್ಕ–ದಿಡುಪೆ ರಸ್ತೆಯ ಪೆಟ್ಟುಕೇರಿ ಎಂಬಲ್ಲಿಂದ ಕವಲೊಡೆಯುವ ಕೊಲ್ಲಾಡು–ಹೊಸಬೆಟ್ಟು ದಾರಿ ಸುಮಾರು 150 ವರ್ಷಗಳ ಹಿಂದೆ ಎತ್ತಿನಗಾಡಿ ಸಾಗುವ ದಾರಿಯಾಗಿತ್ತು. ಸ್ವಾತಂತ್ರ್ಯ ದೊರೆತು 78 ವರ್ಷಗಳಾದರೂ ಈ ಭಾಗಕ್ಕೆ ಇನ್ನೂ ಸರಿಯಾದ ರಸ್ತೆ ನಿರ್ಮಾಣವಾಗಿಲ್ಲ ಎಂದು ಹೇಳಿದರು.


ಈ ಪ್ರದೇಶದಲ್ಲಿ ಪರಿಶಿಷ್ಟ ಪಂಗಡ ಸೇರಿದಂತೆ ಇತರ ಸಮುದಾಯಗಳ 20ಕ್ಕೂ ಹೆಚ್ಚು ಮನೆಗಳಿದ್ದು, ಮಳೆಗಾಲದಲ್ಲಿ ಹೊಳೆ ದಾಟಲು ಸಾಧ್ಯವಾಗದೆ ಜನರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಶಾಶ್ವತ ರಸ್ತೆ ನಿರ್ಮಿಸಲು 2012ರಲ್ಲಿ ಗ್ರಾಮಸ್ಥರು ಸ್ಥಳೀಯ ಶಾಸಕರು ಹಾಗೂ ಕಡಿರುದ್ಯಾವರ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು.
ಗ್ರಾಮಸಭೆಯಲ್ಲಿಯೂ ಹಲವು ಬಾರಿ ರಸ್ತೆ ಬೇಡಿಕೆ ಮುಂದಿಟ್ಟರೂ ಫಲಿತಾಂಶ ಸಿಕ್ಕಿಲ್ಲ. ಬಳಿಕ ಸಂಘಟನೆಯ ವತಿಯಿಂದ ಕಳೆದ ಡಿಸೆಂಬರ್ 16ರಂದು ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಪರಿಶೀಲನೆ ಮಾಡುವುದಾಗಿ ಅವರು ಭರವಸೆ ನೀಡಿದರೂ ಇನ್ನೂ ಸ್ಪಂದನೆ ದೊರೆತಿಲ್ಲ ಎಂದು ಗಿರಿಧರ ನಾಯ್ಕ ಹೇಳಿದರು.
ಈ ಭಾಗದ ಜನರು ಮುಖ್ಯ ರಸ್ತೆಗೆ ಬರಲು ಸುಮಾರು ಒಂದು ಕಿಲೋಮೀಟರ್ ನಡೆದು ಬರಬೇಕಾಗುತ್ತದೆ. ಮನೆಗೆ ಬೇಕಾದ ಸಾಮಾನುಗಳು ಹಾಗೂ ಕೃಷಿ ಉತ್ಪನ್ನಗಳನ್ನು ಹೊತ್ತುಕೊಂಡೇ ಸಾಗಬೇಕಾಗಿದೆ. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹ ಹೊತ್ತುಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುವುದರಿಂದ ದಾಟಲು ಸಾಧ್ಯವಾಗುವುದಿಲ್ಲ ಎಂದು ಅವರು ತಿಳಿಸಿದರು.
ರಸ್ತೆ ನಿರ್ಮಾಣಕ್ಕೆ ಕೆಲವು ಭಾಗದಲ್ಲಿ ಖಾಸಗಿ ವ್ಯಕ್ತಿಯ ಆಕ್ಷೇಪವಿದೆ ಎಂಬ ಮಾಹಿತಿ ಇದ್ದರೂ ಉಳಿದ ಭಾಗದಲ್ಲಿ ರಸ್ತೆ ಹಾಗೂ ಸೇತುವೆ ನಿರ್ಮಾಣ ಸಾಧ್ಯವಿದೆ. ಆದರೂ ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಜನರಿಗೆ ಮೂಲಭೂತ ಸೌಲಭ್ಯದಿಂದ ವಂಚಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಶೀಘ್ರದಲ್ಲಿ ರಸ್ತೆ ನಿರ್ಮಾಣ ಮಾಡಿಕೊಡದಿದ್ದರೆ ಸ್ಥಳೀಯರನ್ನು ಸೇರಿಸಿಕೊಂಡು ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಅಗತ್ಯವಿದ್ದರೆ ಆಹೋರಾತ್ರಿ ಪ್ರತಿಭಟನೆಗೂ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಸ್ತೆ ಸಂತ್ರಸ್ತರಾದ ಶ್ರೀದೇವಿ ಹೊಸಬೆಟ್ಟು, ವಸಂತ ಗೌಡ ಹೊಸಬೆಟ್ಟು, ಸುನಂದ ಕಲ್ಲಬೆಟ್ಟು ಹಾಗೂ ಸ್ವರೂಪ್ ಹೊಸಬೆಟ್ಟು ಉಪಸ್ಥಿತರಿದ್ದರು.

