ಮಂಗಳೂರು: ನಗರದ ಬೆಂದೂರುವೆಲ್ ಪ್ರದೇಶದ ಖಾಸಗಿ ಎಸ್.ಸಿ.ಎಸ್ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ಶಿಶು ಸಾವನ್ನಪ್ಪಿದ ಘಟನೆ ನಡೆದಿದೆ.
ಕೋಡಿಕಲ್ ನಿವಾಸಿಗಳಾದ ಅನಿಲ್ ಮತ್ತು ಪ್ರತೀಕ್ಷಾ ದಂಪತಿಯ ಮೊದಲ ಮಗುವಿನ ಹೆರಿಗೆಗಾಗಿ ಗರ್ಭಿಣಿ ಪ್ರತೀಕ್ಷಾ ಅವರನ್ನು ಸೋಮವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಹೆರಿಗೆ ನಡೆದಿದ್ದು, ಕುಟುಂಬದವರ ಪ್ರಕಾರ ಮೊದಲಿಗೆ ಎಲ್ಲವೂ ಸಾಮಾನ್ಯವಾಗಿದ್ದಂತೆ ತಿಳಿಸಲಾಗಿದೆ




ಆದರೆ, ಬೆಳಿಗ್ಗೆ ವೈದ್ಯರು ಮಗು ಸಾವನ್ನಪ್ಪಿದ ವಿಚಾರವನ್ನು ತಿಳಿಸಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯವೇ ಮಗು ಸಾವಿಗೆ ಕಾರಣವೆಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಆಸ್ಪತ್ರೆಯವರು ಮಗು ಸಾವಿಗೆ ವಿವಿಧ ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿದರೂ, ಮಗು ತಲೆ ಭಾಗದಲ್ಲಿ ಕಂಡುಬಂದ ಗಾಯಗಳು ಅನುಮಾನಕ್ಕೆ ಕಾರಣವಾಗಿದೆ. ಇದನ್ನು ಗಮನಿಸಿದ ಸಂಬಂಧಿಕರು, ಹೆರಿಗೆ ವೇಳೆ ವ್ಯಾಕ್ಯೂಮ್ ಉಪಕರಣವನ್ನು ಬಳಸುವಾಗ ತಲೆ ಭಾಗವನ್ನು ಜೋರಾಗಿ ಎಳೆದ ಪರಿಣಾಮವೇ ಮಗು ಸಾವಿಗೆ ಕಾರಣವಾಗಿರಬಹುದು ಎಂದು ಆರೋಪಿಸಿದ್ದಾರೆ.




