ಕಡಬ : ಗೋಹತ್ಯೆ ನಿಷೇಧ ಹಾಗೂ ಗೋಮಾತೆಗೆ ರಾಷ್ಟ್ರಮಟ್ಟದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಬೇಕು ಎಂಬ ಆಗ್ರಹದೊಂದಿಗೆ ಸಂತರ ನೇತೃತ್ವದಲ್ಲಿ ನಡೆಯುತ್ತಿರುವ “ಗೋಮಾತಾ ಸಮ್ಮಾನ್” ಅಭಿಯಾನದ ಅಂಗವಾಗಿ ಕಡಬದಲ್ಲಿ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.
ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿರುವ ಈ ಅಭಿಯಾನದ ಭಾಗವಾಗಿ ಈಗಾಗಲೇ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆದಿದ್ದು, ಮುಂದಿನ ಹಂತವಾಗಿ ದೇಶದ ಎಲ್ಲಾ ತಾಲೂಕುಗಳಲ್ಲಿ ಮನವಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಂತೆ ಏಪ್ರಿಲ್ 27ರಂದು ಕಡಬದಲ್ಲಿ ಮನವಿ ಸಲ್ಲಿಕೆ ನಡೆದಿದೆ.

ರಾಜ್ಯ ಸಂಯೋಜಕರಾದ ಸಂಜಯ್ ನೀಡಿದ ಸೂಚನೆಯಂತೆ ತಹಶೀಲ್ದಾರರ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿಯನ್ನು ರವಾನಿಸಲಾಯಿತು. ಮನವಿಯ ಪ್ರತಿಗಳನ್ನು ಸಿದ್ಧಪಡಿಸಿ, ಸಹಿ ಹಾಗೂ ಅಧಿಕೃತ ಮುದ್ರೆಯೊಂದಿಗೆ ಸ್ವೀಕೃತಿ ಪಡೆಯುವ ಪ್ರಕ್ರಿಯೆಯನ್ನೂ ಪಾಲಿಸಲಾಯಿತು. ಮನವಿ ಸಲ್ಲಿಕೆಯ ವೇಳೆ ಛಾಯಾಚಿತ್ರಗಳನ್ನು ತೆಗೆದು ದಾಖಲಿಸಲಾಗಿದ್ದು, ಈ ಕುರಿತು ಮಾಧ್ಯಮಗಳಿಗೆ ಮಾಹಿತಿಯನ್ನೂ ನೀಡಲಾಗಿದೆ.
ಕನಿಷ್ಠ ಐದು ಮಂದಿಯ ತಂಡದೊಂದಿಗೆ ಮನವಿ ಸಲ್ಲಿಸುವಂತೆ ಸೂಚನೆ ಇದ್ದ ಹಿನ್ನೆಲೆಯಲ್ಲಿ ಸ್ಥಳೀಯ ಗೋಪ್ರೇಮಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಕೃಷ್ಣ ಎಂ.ಆರ್ ಕಡಬ, ಪ್ರಮೋದ್ ರೈ ನಂದಗುರಿ, ಜಯಂತ್, ಸುಕೇಶ್, ನಿರಂಜನ್ ಸೇರಿದಂತೆ ಇತರರು ಉಪಸ್ಥಿತರಿದ್ದು ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *