ಪುತ್ತೂರು: ಬೆಂಗಳೂರಿನಿಂದ ಊರಿಗೆ ಬಂದಿದ್ದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಪುರುಷರಕಟ್ಟೆ ಇಂದಿರಾನಗರದಲ್ಲಿ ನವೆಂಬರ್ 21ರಂದು ನಡೆದಿದೆ.
ಮೃತರನ್ನು ಪುರುಷರಕಟ್ಟೆ ಇಂದಿರಾನಗರ ನಿವಾಸಿ, ದಿವಂಗತ ಪ್ರವೀಣ್ ಜೋಗಿ ಅವರ ಪುತ್ರ ಪ್ರತೀಕ್ (23) ಎಂದು ಗುರುತಿಸಲಾಗಿದೆ.




ಘಟನೆಯ ವಿವರ:
ಬೆಂಗಳೂರಿನ ಶೋರೂಮ್ ವರ್ಕ್ಶಾಪ್ ಒಂದರಲ್ಲಿ ಉದ್ಯೋಗದಲ್ಲಿದ್ದ ಪ್ರತೀಕ್, ಇತ್ತೀಚೆಗಷ್ಟೇ ಊರಿಗೆ ಬಂದಿದ್ದರು. ಗುರುವಾರ ಮಧ್ಯಾಹ್ನ ಮನೆಯಲ್ಲಿ ಮೊಬೈಲ್ ನೋಡುತ್ತಾ ಕುಳಿತಿದ್ದ ಅವರು, ಏಕಾಏಕಿ ನಾಪತ್ತೆಯಾಗಿದ್ದರು. ಅನುಮಾನಗೊಂಡು ಮನೆಯವರು ಹುಡುಕಾಡಿದಾಗ, ಪ್ರತೀಕ್ ಮನೆಯ ಕೊಠಡಿಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕುಟುಂಬದಲ್ಲಿ ಸರಣಿ ದುರಂತ:
ಮನಕಲಕುವ ಸಂಗತಿಯೆಂದರೆ, ಪ್ರತೀಕ್ ಅವರ ತಂದೆ ಪ್ರವೀಣ್ ಜೋಗಿ ಮತ್ತು ತಾಯಿ ಕಾವ್ಯ ಅವರು ಕೂಡ ಹಿಂದೆ ಇದೇ ರೀತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೀಗ ಮಗನೂ ಪೋಷಕರ ದಾರಿಯಲ್ಲೇ ಸಾವಿಗೆ ಶರಣಾಗಿದ್ದು, ಕುಟುಂಬಕ್ಕೆ ಆಘಾತ ತಂದಿದೆ.
ಮೃತರು ಸಹೋದರಿ ಹಾಗೂ ಚಿಕ್ಕಪ್ಪನನ್ನು ಅಗಲಿದ್ದಾರೆ. ಮೃತರ ಚಿಕ್ಕಪ್ಪ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



