ಯಕ್ಷಗಾನ ಕಲಾವಿದರಲ್ಲಿ ಸಲಿಂಗ ಕಾಮ ಹೆಚ್ಚಾಗಿದೆ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ವಿರುದ್ಧ ಖ್ಯಾತ ಸ್ತ್ರೀ ವೇಷದಾರಿ ರವಿ ಅಲೆವೂರಾಯ ಪೊಲೀಸ್ ದೂರು ಸಲ್ಲಿಸಿದ್ದಾರೆ.
ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ರವಿ ಅಲೆವೂರಾಯ,
“ಯಕ್ಷಗಾನ ಕಲಾವಿದರ ತೇಜೋವಧೆಗೈದು, ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಬಿಳಿಮಲೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ,” ಎಂದು ಆರೋಪಿಸಿದ್ದಾರೆ.




ಬಿಳಿಮಲೆ ಅಭಿಪ್ರಾಯವು ಯಕ್ಷಗಾನ ಕ್ಷೇತ್ರ ಹಾಗೂ ಕಲಾವಿದರ ಗೌರವಕ್ಕೆ ಧಕ್ಕೆ ತಂದಿದೆ ಎಂದು ಹೇಳಿರುವ ರವಿ, ಕಲಾವಿದರ ವಿರುದ್ಧ ಕಳಪೆ ಪ್ರಚಾರಕ್ಕೆ ಕಾರಣವಾದ ಈ ಹೇಳಿಕೆಯನ್ನು ಕಾನೂನುಬದ್ಧವಾಗಿ ಪ್ರಶ್ನಿಸಿದ್ದಾರೆ.
ಪೊಲೀಸರು ದೂರು ಸ್ವೀಕರಿಸಿ ಪ್ರಾಥಮಿಕ ವಿಚಾರಣೆ ಆರಂಭಿಸಿದ್ದು,
ಯಾವುದೇ ಕ್ಷಣದಲ್ಲಿ ಅಪರಾಧ ಪ್ರಕರಣ (FIR) ದಾಖಲಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಘಟನೆ ಯಕ್ಷಗಾನ ಕ್ಷೇತ್ರದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಕಲಾವಿದರಿಂದಲೂ ಬಿಳಿಮೆಲೆ ಹೇಳಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.



