ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ಮದ್ಯದ ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ಇದರಿಂದ ಮದ್ಯ ಪ್ರಿಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಈ ವಿಚಾರದಲ್ಲಿ ಪರಿಹಾರ ಕಂಡುಕೊಳ್ಳುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಮದ್ಯ ಪ್ರಿಯರಿಗೆ ಒಂದು ಕಡೆ ಬೆಲೆ ಏರಿಕೆಯ ಶಾಕ್ ಎದುರಾಗಿದ್ದರೆ ಮತ್ತೊಂದು ಕಡೆ ಮದ್ಯದಂಗಡಿಗಳಲ್ಲಿ ಗರಿಷ್ಠ ಚಿಲ್ಲರೆ ಬೆಲೆಯ (ಎಂಆರ್ಪಿ) ನಿಯಮ ಉಲ್ಲಂಘನೆ ಸಹ ನಡೆದಿತ್ತು. ಇದೀಗ ಇದಕ್ಕೆ ಬ್ರೇಕ್ ಹಾಕುವುದಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಮೂಲಕ ಮದ್ಯ ಪ್ರಿಯರಿಗೆ ಪರೋಕ್ಷ ಗುಡ್ನ್ಯೂಸ್ ಸಿಕ್ಕಿದೆ.




ಬೆಂಗಳೂರು ಹಾಗೂ ಕರ್ನಾಟಕದ ವಿವಿಧ ಪ್ರದೇಶದಲ್ಲಿ ಮದ್ಯ ಮಾರಾಟ ಜೋರಾಗಿದೆ. ಆದರೆ ಮದ್ಯದ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡಿದ ಮೇಲೆ ಮದ್ಯ ಮಾರಾಟ ಪ್ರಮಾಣವು ಕುಸಿತ ಕಂಡಿದೆ. ಅಲ್ಲದೇ ಮದ್ಯ ಮಾರಾಟದಿಂದ ಭಾರೀ ಆದಾಯ ನಿರೀಕ್ಷೆ ಮಾಡಿದ್ದ ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆಯೂ ಆಗಿತ್ತು. ಇದೀಗ ರಾಜ್ಯದಲ್ಲಿ ಕೆಲವೊಂದು ಮದ್ಯದ ಅಂಗಡಿಗಳಲ್ಲಿ / ಬಾರ್ಗಳಲ್ಲಿ ಗರಿಷ್ಠ ಚಿಲ್ಲರೆ ಬೆಲೆಯ (ಎಂಆರ್ಪಿ) ನಿಯಮ ಉಲ್ಲಂಘನೆ ಮಾಡುತ್ತಿರುವುದನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ ಎಂದು “ವಿಜಯ ಕರ್ನಾಟಕ” ವರದಿ ಮಾಡಿದೆ.
ಹೌದು ಕರ್ನಾಟಕ ಸರ್ಕಾರದ ಪ್ರಮುಖ ಆದಾಯ ಮೂಲಗಳಲ್ಲಿ ಮದ್ಯ ಮಾರಾಟವೂ ಪ್ರಮುಖವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಬಕಾರಿ ಇಲಾಖೆಯು ನಿರೀಕ್ಷಿತ ಗುರಿಯನ್ನು ಮುಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ ಇದಕ್ಕೆ ಮುಖ್ಯ ಕಾರಣ ರಾಜ್ಯ ಕಾಂಗ್ರೆಸ್ ಸರ್ಕಾರವು ಬಿಯರ್ ಸೇರಿದಂತೆ ವಿವಿಧ ಮದ್ಯಗಳ ಬೆಲೆ ದುಬಾರಿ ಆಗಿರುವುದು ಸಹ ಕಾರಣ ಅಲ್ಲದೇ ಈ ರೀತಿ ಕೆಲವು ಬಾರ್ಗಳು ಈಗಾಗಲೇ ದುಬಾರಿ ಆಗಿರುವ ಮದ್ಯಗಳ ಮೇಲೆ ಇನ್ನಷ್ಟು ಬೆಲೆ ಏರಿಕೆ ಮಾಡಿರುವುದು ಸಹ ಕಾರಣವಾಗಿದೆ ಎನ್ನುವುದನ್ನು ಕರ್ನಾಟಕ ಅಬಕಾರಿ ಇಲಾಖೆ ಪತ್ತೆ ಮಾಡಿದೆ.
ನಿಯಮ ಉಲ್ಲಂಘನೆ ಮಾಡಿ ಮದ್ಯ ಮಾರಾಟ ಮಾಡುತ್ತಿರುವ ಕೆಲವೊಂದು ಬಾರ್ಗಳ ಮೇಲೆ ಕಣ್ಣಿರಿಸಲಾಗಿದ್ದು, ಕಾನೂನು ಕ್ರಮಕ್ಕೆ ಸರ್ಕಾರ ಮುಂದಾಗಿದೆ. ನಿಯಮ ಉಲ್ಲಂಘನೆಯು ಮದ್ಯ ಪ್ರಿಯರಿಗೆ ದುಬಾರಿ ಬೆಲೆ ನೀಡುವಂತೆ ಆಗಿತ್ತು. ಅಲ್ಲದೇ ಹೆಚ್ಚು ಲಾಭ ಮಾಡುವ ಉದ್ದೇಶದಿಂದಾಗಿ ಬಾರ್ಗಳಲ್ಲಿ ಗರಿಷ್ಠ ಚಿಲ್ಲರೆ ಬೆಲೆಯ (ಎಂಆರ್ಪಿ) ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ. ಇದೀಗ ಮದ್ಯದಂಗಡಿ ಮಾಲೀಕರಿಗೆ / ಬಾರ್ ಮಾಲೀಕರಿಗೆ ಬಿಸಿ ಮುಟ್ಟಿಸುವುದಕ್ಕೆ ಅಬಕಾರಿ ಇಲಾಖೆ ಮುಂದಾಗಿದೆ. ಎಂಆರ್ಪಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿರುವ ಬಾರ್ಗಳನ್ನು ಪತ್ತೆ ಮಾಡುವ ಮೂಲಕ ಬರೋಬ್ಬ 12 ಕೋಟಿ ರೂ.ಗಳಷ್ಟು ಮೊತ್ತದ ಬೃಹತ್ ದಂಡ ಸಂಗ್ರಹಿಸಿದೆ.
ಬಾರ್ಗಳಲ್ಲಿ ನಿಯಮ ಉಲ್ಲಂಘನೆ: ಇನ್ನು ಕರ್ನಾಟಕದಲ್ಲಿ ಅಬಕಾರಿ ಇಲಾಖೆಯ ನಿಯಮಾನುಸಾರ ಚಿಲ್ಲರೆ ಮದ್ಯದಂಗಡಿಗಳು ಮತ್ತು ಎಂಎಸ್ಐಎಲ್ ಮಳಿಗೆಗಳಲ್ಲಿ ಕಡ್ಡಾಯವಾಗಿ ಮದ್ಯದ ದರ ಪಟ್ಟಿ (ವಿವಿಧ ಮದ್ಯಗಳಿಗೆ ಸರ್ಕಾರ ನಿಗದಿ ಮಾಡಿರುವ ಬೆಲೆ ಏನು) ಎಂದು ಹಾಕಬೇಕು. ಆದರೆ, ರಾಜ್ಯದ ಹಲವು ಬಾರ್ ಮತ್ತು ಮದ್ಯದಂಗಡಿಗಳಲ್ಲಿ ದರ ಪಟ್ಟಿಯನ್ನೇ ಹಾಕದೆ ಮದ್ಯ ಪ್ರಿಯರಿಗೆ ಶಾಕ್ ನೀಡಲಾಗುತ್ತಿದೆ. ಇಷ್ಟಕ್ಕೆ ಬಂದ ಬೆಲೆಯನ್ನು ನಿಗದಿ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅಲ್ಲದೇ ಇನ್ನೂ ಕೆಲವು ಮದ್ಯದಂಗಡಿಗಳಲ್ಲಿ ದರ ಪಟ್ಟಿ ಹಾಕಿದ್ದರೂ ಸಹ ಹೆಚ್ಚು ಬೆಲೆಯ ಮದ್ಯಗಳ ಬೆಲೆಯನ್ನು ಮಾತ್ರ ಹಾಕಲಾಗಿದೆ.
ಅಬಕಾರಿ ಇಲಾಖೆ ವೆಬ್ಸೈಟ್ನಲ್ಲೂ ಪರಿಷ್ಕೃತ ಎಂಆರ್ಪಿಯ ವಿವರವಿಲ್ಲ. ವೈನ್ಶಾಪ್ (ಸಿಎಲ್-2), ಎಂಎಸ್ಐಎಲ್ ಮಳಿಗೆಗಳಲ್ಲಿ ಗ್ರಾಹಕರು ನಿಗದಿತ ಬೆಲೆಯಲ್ಲಿ ಪಾರ್ಸೆಲ್ ಮೂಲಕ ಮಾತ್ರ ಮದ್ಯ ಖರೀದಿ ಮಾಡಬೇಕು ಎನ್ನುವ ನಿಯಮವಿದೆ. ಅಲ್ಲದೇ ಯಾವುದೇ ಕಾರಣಕ್ಕೂ ಮಳಿಗೆಯಲ್ಲೇ ಮದ್ಯ ತೆಗೆದುಕೊಳ್ಳುವಂತಿಲ್ಲ ಅಂತ ನಿಯಮ ಇದೆ. ಆದರೆ, ಮಳಿಗೆಗಳ ಮಾಲೀಕರು ಕೂಲಿಂಗ್ ಸೇರಿದಂತೆ ಬೇರೆ ಬೇರೆ ಶುಲ್ಕ ವಿಧಿಸಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ ಎನ್ನುವ ವಿಷಯವೂ ಇದೀಗ ಬೆಳಕಿಗೆ ಬಂದಿದೆ. ಹೀಗಾಗಿ, ಕಟ್ಟುನಿಟ್ಟಿನ ಕ್ರಮಕ್ಕೆ ಅಬಕಾರಿ ಇಲಾಖೆ ಮುಂದಾಗಿದೆ. ಈ ಮೂಲಕ ಮದ್ಯ ಪ್ರಿಯರಿಗೆ ಗುಡ್ನ್ಯೂಸ್ ನೀಡಲಾಗಿದೆ.



