ಸಿನಿಮಾ ಎನ್ನುವುದು ಕಲೆಯೂ ಹೌದು. ಉದ್ಯಮ ಕೂಡ ಹೌದು. ಆದರೆ .. ಹಿಂದೆ ಸಿನಿಮಾ ತನ್ನ ಕಾಲದ ಕಥೆ ಹೇಳುತ್ತಿತ್ತು. ಆ ಕಾಲದ ಸಂಸ್ಕ್ರತಿ.. ಆರ್ಥಿಕ ವ್ಯವಸ್ಥೆ.. ಸಾಮಾಜಿಕ ರೀತಿ ನೀತಿ.. ಎಲ್ಲದಕ್ಕೂ ಸಿನಿಮಾ ಕೈಗನ್ನಡಿ ಹಿಡಿಯುತ್ತಿತ್ತು. ನಮ್ಮ ದೇಶದ ಬೇರೆ ಬೇರೆ ಭಾಷೆ ..

ಪ್ರಾದೇಶಿಕ .. ಸ್ಥಳಿಯ .. ಸಾಂಸ್ಕ್ರತಿಕ .. ಸಾಮಾಜಿಕ ..

ಹೀಗೆ ವೈವಿಧ್ಯತೆಗಳಿಂದ ಸಿನಿಮಾ ಕೂಡಿರುತ್ತಿತ್ತು. ಆದರೆ.. ಈಗೀಗ ಈ ಕಲೆ ಮಾಯವಾಗಿದೆ. ಅಲ್ಲೊಬ್ಬರು.. ಇಲ್ಲೊಬ್ಬರು.. ಹೊರತು ಪಡಿಸಿದರೆ ಸಂಸ್ಕೃತಿ.. ಪರಂಪರೆ.. ಭಾಷೆಯನ್ನು ಪ್ರತಿನಿಧಿಸುವ ಪ್ರಯತ್ನವನ್ನು ಯಾರು ಮಾಡುತ್ತಿಲ್ಲ. ಬದಲಿಗೆ ಎಲ್ಲರೂ ವ್ಯಾಪಾರಕ್ಕೆ ಇಳಿದಿದ್ದಾರೆ. ಹೀಗಾಗಿ ಕೇವಲ ಉದ್ಯಮವಾಗಿ ಮಾತ್ರ ಸಿನಿಮಾ ಉಳಿದಿದೆ.

ಅದರಲ್ಲಿಯೂ ಹಿಂದಿ ಚಿತ್ರರಂಗ ನಮ್ಮ ನೆಲದ ಸಂಸ್ಕ್ರತಿಯನ್ನೇ ಮರೆತಂತೆ ಇದೆ. ದುಡ್ಡಿನ ಅಮಲು.. ಜನಪ್ರಿಯತೆಯ ಗುಂಗು.. ತಾವೇ ಸರ್ವಶ್ರೇಷ್ಠರು ಎನ್ನುವ ಮನೋಭಾವ.. ಇದೆಲ್ಲದರಿಂದ ಬಾಲಿವುಡ್‌ನಲ್ಲಿ ಹಲವರು ಸಂವೇದನೆ ಕಳೆದುಕೊಂಡಿದ್ದಾರೆ. ಇದಕ್ಕೆ ರಣ್‌ವೀರ್ ಸಿಂಗ್ ಸದ್ಯದ ಉದಾಹರಣೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಮೊನ್ನೆ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿ ಅವರನ್ನು ಹೊಗಳುವ ಭರದಲ್ಲಿ ದೀಪಿಕಾ ಪಡುಕೋಣೆಯ ಪತಿ ರಣವೀರ್ ಸಿಂಗ್ ಅಕ್ಷರಶಃ ಹುಚ್ಚನಂತೆ ವರ್ತಿಸಿದರು. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಅನುಕರಣೆ ಮಾಡಿದರು. ಮುಖಭಾವ ತಮ್ಮ ಧ್ವನಿಯ ಮೂಲಕ ದೈವಕ್ಕೆ ಅಪಮಾನ ಮಾಡಿದರು.

ರಣ್‌ವೀರ್ ಸಿಂಗ್ ಅವರ ಈ ವರ್ತನೆ ಸಹಜವಾಗಿಯೇ ಹಲವರನ್ನು ಕೆರಳಿಸಿತ್ತು. ಕರುನಾಡಿನೆಲ್ಲೆಡೆ ಮಾತ್ರವಲ್ಲ ದೇಶದ ನಾನಾ ಕಡೆ ರಣ್‌ವೀರ್ ಸಿಂಗ್ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.#ShameOnRanveerSingh ಹ್ಯಾಶ್ ಟ್ಯಾಗ್ ”ಎಕ್ಸ್‌”ನಲ್ಲಿ (ಟ್ವಿಟರ್) ಟ್ರೆಂಡ್ ಆಗಿತ್ತು. ರಣವೀರ್ ಸಿಂಗ್ ಮಂಗಳೂರಿನ ಕದ್ರಿ ಮಂಜುನಾಥನ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕು. ಈ ತುಳುನಾಡಿನ ಮಣ್ಣಿಗೆ ಶರಣಾಗಬೇಕು ಎಂಬ ಕೂಗು ಕೂಡ ಕೇಳಿ ಬಂದಿತ್ತು.

ದೇಶವ್ಯಾಪಿ ತನ್ನ ವಿರುದ್ಧ ಎದ್ದ ಈ ಆಕ್ರೋಶದ ಅಲೆಯನ್ನು ಕಂಡು ಸದ್ಯ ಬೆಚ್ಚಿ ಬಿದ್ದಿರುವ ರಣವೀರ್ ಸಿಂಗ್, ತಮ್ಮ ಈ ವರ್ತನೆಗೆ ಕೊನೆಗೂ ಈಗ ಕ್ಷಮೆ ಕೇಳಿದ್ದಾರೆ. ನೋವುಂಟು ಮಾಡುವ ಉದ್ದೇಶ ನನ್ನದಾಗಿರಲಿಲ್ಲ ಎಂದಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ರಣ್‌ವೀರ್ ಸಿಂಗ್ ಚಿತ್ರದಲ್ಲಿನ ರಿಷಬ್ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ಅಷ್ಟೇ ನನ್ನ ಮುಖ್ಯ ಉದ್ದೇಶವಾಗಿತ್ತು. ಒಬ್ಬ ನಟನಾಗಿ ಆ ದೃಶ್ಯವನ್ನು ಮಾಡಲು ಎಷ್ಟು ಶ್ರಮ ವಹಿಸಬೇಕು ಎಂಬುದು ನನಗೆ ತಿಳಿದಿದೆ. ಹೀಗಾಗಿ ಅವರ ಬಗ್ಗೆ ನನಗೆ ಮೆಚ್ಚುಗೆ ಇದೆ ಎಂದು ಹೇಳಿದ್ದಾರೆ.

ಮುಂದುವರೆದು ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ.. ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಆಳವಾಗಿ ಗೌರವಿಸುತ್ತೇನೆ ಎಂದು ಹೇಳಿರುವ ರಣವೀರ್ ಸಿಂಗ್ ನನ್ನಿಂದ ಯಾರದ್ದಾದರೂ ಭಾವನೆಗಳಿಗೆ ಧಕ್ಕೆಯುಂಟಾಗಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಒಟ್ನಲ್ಲಿ ಸದ್ಯ ಮಾಡಿದ ತಪ್ಪಿಗೆ ರಣವೀರ್ ಸಿಂಗ್, ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಕ್ಷಮೆಯನ್ನು ಕೇಳಿದ್ದಾರೆ. ಈ ಹಿನ್ನೆಲೆ ಈ ವಿವಾದ ಇಲ್ಲಿಗೆ ಮುಕ್ತಾಯವಾಗುತ್ತಾ..? ಅಥವಾ ಮಾಡಿದ ಈ ತಪ್ಪಿಗೆ ಮುಂದಿನ ದಿನಗಳಲ್ಲಿ ಕೂಡ ರಣವೀರ್ ಸಿಂಗ್ ಜನಾಕ್ರೋಶ ಎದುರಿಸಬೇಕಾಗುತ್ತಾ..? ಪರಿಣಾಮವನ್ನು ಎದುರಿಸಬೇಕಾಗುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *