ಬೆಂಗಳೂರು: ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಹೆಸರುಗಟ್ಟ ರಸ್ತೆಯ ಶಾಂತಿನಗರದಲ್ಲಿ ಬೆಳಕಿಗೆ ಬಂದಿದೆ. ಕೇರಳ ಮೂಲದ ಜಗನ್ಮೋಹನ್ (25) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಮೃತ ಯುವಕನು ದ್ವಿತೀಯ ವರ್ಷದ ಎಂಬಿಎ ವಿದ್ಯಾರ್ಥಿಯಾಗಿದ್ದು, ಶಾಂತಿನಗರದಲ್ಲಿರುವ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದನು. ರಾತ್ರಿ ತನ್ನ ಕೊಠಡಿಯಲ್ಲಿ ಡೆತ್ ನೋಟು ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.




ವಿಡಿಯೋ ಕಾಲ್ ಟಾರ್ಚರ್ ಹಿನ್ನೆಲೆ ಶಂಕೆ
ಡೆತ್ ನೋಟಿನಲ್ಲಿ ಮೂವರು ದೂರವಾಣಿ ಸಂಖ್ಯೆಗಳು ಉಲ್ಲೇಖಗೊಂಡಿದ್ದು, ಯುವಕನು ಯಾರೋ ಫೇಕ್ ವಿಡಿಯೋ ಕಾಲ್ ಮೂಲಕ ಬೆತ್ತಲೆ ಫೋಟೋ ಮತ್ತು ವಿಡಿಯೋ ತೆಗೆಯಲಾಗುತ್ತಿದೆ, ಜೊತೆಗೆ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾನೆ.
ಪೊಲೀಸರಿಗೆ ಲಭ್ಯವಾದ ಮಾಹಿತಿಯ ಪ್ರಕಾರ, ಜಗನ್ಮೋಹನ್ ಒಟ್ಟು ₹25,000 ಹಣ ವರ್ಗಾವಣೆ ಮಾಡಿದ್ದರೂ, ಮುಂದುವರಿದ ಒತ್ತಡ ಹಾಗೂ ಬೆದರಿಕೆಗಳಿಂದ ಆತ್ಮಹತ್ಯೆಗೆ ಹೋಗಿರುವ ಸಾಧ್ಯತೆ ವ್ಯಕ್ತವಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಸೋಳದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ BMS 106 ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ದೂರವಾಣಿ ಸಂಖ್ಯೆಗಳ ಆಧಾರದ ಮೇಲೆ ತನಿಖೆಯನ್ನು ಆರಂಭಿಸಿದ್ದಾರೆ.



