ಪುತ್ತೂರು: ಬನ್ನೂರು ಮೇಲ್ಮಜಲು ಮೂಲದ ಸಿವಿಲ್ ಇಂಜಿನಿಯರ್ ಅರುಣ್ ಆಚಾರ್ಯ (51) ಅವರು ಹೃದಯಘಾತದಿಂದ ಡಿಸೆಂಬರ್ 19ರಂದು ನಿಧನರಾದರು.
ಮೃತ ಅರುಣ್ ಆಚಾರ್ಯ ಅವರು ಬನ್ನೂರು ಮೇಲ್ಮಜಲು ನಿವಾಸಿಯಾಗಿದ್ದು, ಕಂದಾಯ ಇಲಾಖೆಯ ನಿವೃತ್ತ ಖಜಾನಾಧಿಕಾರಿ ವಿಠಲ ಆಚಾರ್ಯ ಅವರ ಪುತ್ರರಾಗಿದ್ದರು. ಮುಂಡೂರು ಶೆಟ್ಟಿ ಮಜಲು ನಿವಾಸಿಯಾಗಿರುವ ಅವರು ವೃತ್ತಿಯಿಂದ ಸಿವಿಲ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು.




ಡಿಸೆಂಬರ್ 19ರಂದು ಪುತ್ತೂರು ಬೈಪಾಸ್ ರಸ್ತೆಯಲ್ಲಿನ ಹೋಟೆಲ್ ಒಂದರಲ್ಲಿ ಉಪಹಾರ ಸೇವಿಸಿ ಕೈ ತೊಳೆದು ಹೊರಗೆ ಬರುತ್ತಿದ್ದ ವೇಳೆ ಅಚಾನಕ್ ಕುಸಿದು ಬಿದ್ದು ಅಸ್ವಸ್ಥರಾದರು. ಕೂಡಲೇ ಆಸ್ಪತ್ರೆಗೆ ಸಾಗಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ತಂದೆ ವಿಠಲ ಆಚಾರ್ಯ, ಪತ್ನಿ, ಪುತ್ರ ಹಾಗೂ ಸಹೋದರರಾದ ಶಿಕ್ಷಕ ಕಿಶನ್ ಆಚಾರ್ಯ ಮತ್ತು ಎಸ್.ಜಿ. ಸೊಸೈಟಿಯ ಮ್ಯಾನೇಜರ್ ಆಗಿರುವ ಕಿರಣ್ ಆಚಾರ್ಯ ಅವರನ್ನು ಅಗಲಿದ್ದಾರೆ.
ಅರುಣ್ ಆಚಾರ್ಯ ಅವರ ಅಕಾಲಿಕ ನಿಧನಕ್ಕೆ ಕುಟುಂಬಸ್ಥರು, ಬಂಧುಬಳಗ ಹಾಗೂ ಸಹೋದ್ಯೋಗಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.




