ಮಂಗಳೂರು: ಅಕಸ್ಮಾತ್ ಪಾಳು ಬಾವಿಗೆ ಬಿದ್ದ ಒಂಟಿ ಸಲಗವೊಂದನ್ನು ಎಂಟು ಗಂಟೆಗಳ ಕಾರ್ಯಾಚರಣೆಯ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೆರಾಜೆ ಗ್ರಾಮದಲ್ಲಿ ನಡೆದಿದೆ.
ಪೆರಾಜೆ ಗ್ರಾಮದ ಕಲ್ಲಚರ್ಪ ಎಂಬಲ್ಲಿನ ನಿವಾಸಿ ರಾಮ ನಾಯ್ಕ ಎಂಬವರ ತೋಟದಲ್ಲಿ ಎಪ್ರಿಲ್ 12ರ ಭಾನುವಾರ ರಾತ್ರಿ 11 ಗಂಟೆ ವೇಳೆಗೆ ಆನೆ ಘೀಳಿಡುವ ಶಬ್ದ ಕೇಳಿಸಿತ್ತು. ಈ ಪ್ರದೇಶದಲ್ಲಿ ಆನೆಗಳು ಘೀಳಿಡೋದು ಸಾಮಾನ್ಯ ಎಂದುಕೊಂಡರೂ ನಿರಂತರವಾಗಿ ಬೊಬ್ಬೆ ಹಾಕಿದ್ದನ್ನು ಕೇಳಿ ಏನೋ ಸಂಭವಿಸಿದೆ ಎಂದು ಸಂಶಯ ಮೂಡಿತ್ತು. ಸ್ಥಳೀಯರು ಬಳಿಕ ತೋಟದಲ್ಲಿ ನೋಡಿದಾಗ ಕಾಡಾನೆಯೊಂದು 30 ಅಡಿ ಆಳದ ಪಾಳು ಬಾವಿಯಲ್ಲಿ ಬಿದ್ದಿರೋದು ಕಾಣಿಸಿದೆ. ತಕ್ಷಣವೇ ಸ್ಥಳೀಯ ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿತ್ತು.





ಬಾವಿ ಎತ್ತರದ ಭಾಗದಲ್ಲಿದ್ದು, ಅಡ್ಡಲಾಗಿ ಹೊಂಡ ತೋಡಿಯೇ ಆನೆಯನ್ನು ರಕ್ಷಿಸಲು ಸಾಧ್ಯ ಎಂದು ಮನಗಂಡ ಅಧಿಕಾರಿಗಳು ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಬಾವಿಗೆ ಸಮನಾಗಿ ಜೆಸಿಬಿಯಿಂದ ಮಣ್ಣು ಕೊರೆದು ಆ ಮೂಲಕ ಆನೆಯನ್ನು ಬಾವಿಯಿಂದ ಹೊರ ತೆಗೆಯಲು ಪ್ಲಾನ್ ಮಾಡಲಾಗಿತ್ತು. ಅದರಂತೆ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಕಾರ್ಯಾಚರಣೆ ಆರಂಭಿಸಿದ್ದು ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಂಡಿದೆ. ಆನೆಯನ್ನು ಬಾವಿಯಿಂದ ನೇರವಾಗಿ ಕಾಡಿಗೆ ಕಳುಹಿಸಲು ಯೋಜನೆ ಹಾಕಲಾಗಿತ್ತಾದರೂ, ಬಾವಿಯಿಂದ ಹೊರ ಬಂದ ಆನೆ ನೇರವಾಗಿ ಮೊದಲಿಗೆ ಅಲ್ಲಿದ್ದ ಜೆಸಿಬಿಯನ್ನೇ ಟಾರ್ಗೆಟ್ ಮಾಡಿದೆ. ಬಳಿಕ ಪಕ್ಕದಲ್ಲೇ ಇದ್ದ ಕೃಷಿ ತೋಟದ ಮಧ್ಯೆ ಓಡಿ ಮರೆಯಾಗಿದೆ.
ಆನೆಯನ್ನು ಪಟಾಕಿ ಸಿಡಿಸುವ ಮೂಲಕ ಕೃಷಿ ತೋಟದಿಂದ ಪೂವಾಜೆ ರಕ್ಷಿತಾರಣ್ಯಕ್ಕೆ ಸೇರಿಸುವ ಕೆಲಸವನ್ನು ಅರಣ್ಯ ಸಿಬ್ಬಂದಿ ಮಾಡಿದ್ದಾರೆ. ಸುಮಾರು 150 ಕ್ಕೂ ಮಿಕ್ಕಿದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.




