ಇಳಂತಿಲ ಗ್ರಾಮದಲ್ಲಿ ಒಂಟಿಯಾಗಿ ವಾಸವಿದ್ದ ಸುಂದರಿ (65) ಎಂಬುವವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವನ್ನಪ್ಪಿ ಮೂರು ದಿನ ಕಳೆದರೂ ನೆರೆಹೊರೆಯವರಿಗೆ ತಿಳಿಯದಿರುವುದು ಆಧುನಿಕ ಜೀವನದ ದುರಂತಕ್ಕೆ ಕನ್ನಡಿ ಹಿಡಿದಿದೆ.






ನಾವು ಎಷ್ಟೇ ಮುಂದುವರಿದಿದ್ದರೂ, ತಾಂತ್ರಿಕವಾಗಿ ಎಷ್ಟೇ ಬೆಳೆದಿದ್ದರೂ ಮಾನವೀಯ ಸಂಬಂಧಗಳ ನಡುವೆ ಎಷ್ಟು ದೊಡ್ಡ ಕಂದಕ ಸೃಷ್ಟಿಯಾಗಿದೆ ಎಂಬುದಕ್ಕೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ನೇಜಿಕಾರ್ನಲ್ಲಿ ನಡೆದ ಘಟನೆಯೇ ಸಾಕ್ಷಿ. ಮನೆಯಲ್ಲಿ ಮಹಿಳೆಯೋರ್ವರು ಸಾವನ್ನಪ್ಪಿ ಮೂರು ದಿನ ಕಳೆದರೂ ನೆರೆಹೊರೆಯವರಿಗಾಗಲಿ, ಸಂಬಂಧಿಕರಿಗಾಗಲಿ ತಿಳಿಯದೆ, ಕೊನೆಗೆ ಜನಗಣತಿ ಅಧಿಕಾರಿಗಳು ಬಂದಾಗಲೇ ವಿಷಯ ಬೆಳಕಿಗೆ ಬಂದಿದೆ.
ಇಳಂತಿಲ ಗ್ರಾಮದ ನೇಜಿಕಾರ್ ನಿವಾಸಿ ಸುಂದರಿ (65) ಎಂಬುವವರು ತಮ್ಮ ಮನೆಯಲ್ಲಿ ಒಂಟಿಯಾಗಿ ವಾಸವಿದ್ದರು. ಏಪ್ರಿಲ್ 14ರಂದು ಅವರು ಕೊನೆಯ ಬಾರಿಗೆ ಸ್ಥಳೀಯರಿಗೆ ಕಾಣಿಸಿಕೊಂಡಿದ್ದರು. ಆದರೆ, ಅದಾದ ಬಳಿಕ ಅವರು ಮನೆಯಿಂದ ಹೊರಬಂದಿರಲಿಲ್ಲ. ಏಪ್ರಿಲ್ 18ರಂದು ಜನಗಣತಿ ಕಾರ್ಯಕ್ಕಾಗಿ ಸಿಬ್ಬಂದಿಯೊಬ್ಬರು ಅವರ ಮನೆಗೆ ಭೇಟಿ ನೀಡಿದಾಗ ಮನೆಯ ಬಾಗಿಲು ತೆರೆದಿರುವುದು ಕಂಡುಬಂದಿದೆ. ಒಳಗೆ ಹೋದಾಗ ತೀವ್ರವಾದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರು ಬಂದು ನೋಡಿದಾಗ ಸುಂದರಿ ಅವರ ಶವ ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಸಾವನ್ನಪ್ಪಿ ಸುಮಾರು ಎರಡು ಮೂರು ದಿನಗಳು ಕಳೆದಿರಬಹುದು ಎಂದು ಅಂದಾಜಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪರವೂರಿನಲ್ಲಿದ್ದ ಅವರ ಮಗಳನ್ನು ಸಂಪರ್ಕಿಸಿ, ಮರಣೋತ್ತರ ಪರೀಕ್ಷೆಯ ನಂತರ ಅಂತ್ಯಕ್ರಿಯೆ ನೆರವೇರಿಸಲಾಯಿತು.



