ವಿದ್ಯುತ್ ಶಾಕ್ ತಗುಲಿ 15 ವರ್ಷದ ಬಾಲಕ ಶಹೀರ್ ಸಾವನ್ನಪ್ಪಿದ್ದಾನೆ. ನೇರಳಕಟ್ಟೆ ನಿವಾಸಿಯಾದ ಈತ ರಜೆಯ ಹಿನ್ನೆಲೆ ಅಜ್ಜನ ಮನೆಗೆ ಬಂದಿದ್ದಾಗ ಈ ಘಟನೆ ನಡೆದಿದೆ.

ಪುತ್ತೂರು: ತಾಲೂಕಿನ ಗಡಿಯಾರ ಎಂಬಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ 15 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ದಾರುಣ ಘಟನೆ ಇಂದು (ಶನಿವಾರ) ಬೆಳಿಗ್ಗೆ ನಡೆದಿದೆ.

ಮೃತ ಬಾಲಕನನ್ನು ನೇರಳಕಟ್ಟೆ ಸಮೀಪದ ಗಣೇಶ ನಗರದ ಪ್ಲಾಟ್ ನಿವಾಸಿ ಶರೀಫ್ ಎಂಬವರ ಪುತ್ರ ಶಹೀರ್ (15) ಎಂದು ಗುರುತಿಸಲಾಗಿದೆ. ಶಹೀರ್ ಪುತ್ತೂರಿನ ಮೌಂಟೇನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದನು.

ಶಾಲೆಗೆ ರಜೆ ಇದ್ದ ಕಾರಣ ಶಹೀರ್ ತನ್ನ ಅಜ್ಜನ ಮನೆಯಾದ ಗಡಿಯಾರಕ್ಕೆ ಬಂದಿದ್ದನು. ಇಂದು ಬೆಳಿಗ್ಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಓದಿನಲ್ಲಿ ಮುಂದಿದ್ದ ಹಾಗೂ ಲವಲವಿಕೆಯಿಂದಿದ್ದ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ರಜೆ ಮುಗಿಸಿ ಮನೆಗೆ ಮರಳಬೇಕಿದ್ದ ಮಗ ಹೆಣವಾಗಿ ಮರಳುತ್ತಿರುವುದನ್ನು ಕಂಡು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Leave a Reply

Your email address will not be published. Required fields are marked *