ಪುತ್ತೂರು ಉಮೇಶ್ ನಾಯಕ್ ಹಾಗೂ ಯುವ ವರ್ಣ ಚಿತ್ರ ಕಲಾವಿದ ಯುಧಿಷ್ಠಿರ್ ಗೌಡ ಅವರಿಗೆ ಅಭಿನಂದನೆ
ಪುತ್ತೂರು, ಏಪ್ರಿಲ್ 25: ಸ್ಥಳೀಯ ನೆಲ್ಲಿಕಟ್ಟೆಯ ಶ್ರೀರಾಮಕೃಷ್ಣ ಸೇವಾಶ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ವತಿಯಿಂದ ಆಶ್ರಮದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ 10 ದಿನಗಳ ಉಚಿತ ಚಿತ್ರಕಲಾ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಯಶಸ್ವಿಯಾಗಿ ನೆರವೇರಿತು.
ಸಮಾರೋಪ ಸಮಾರಂಭದ ಮುಖ್ಯ ಭಾಷಣಗಾರರಾಗಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುವರ್ಣ ಕನ್ನಡಿಗ ಉಮೇಶ್ ನಾಯಕ್ ಅವರು ಭಾಗವಹಿಸಿ ಮಾತನಾಡಿ, “ಆಟವಾಡುವ ವಯಸ್ಸಿನಲ್ಲಿ ತಾನು ಕಲಿತ ವರ್ಣಚಿತ್ರಕಲೆಯನ್ನು ಯುಧಿಷ್ಠಿರ್ ಗೌಡ ಅವರು ಆಶ್ರಮದ ಪುಟಾಣಿ ಮಕ್ಕಳಿಗೆ ಬೋಧಿಸುತ್ತಿರುವುದು ಶ್ಲಾಘನೀಯ. ಇದು ಶಿಬಿರವನ್ನು ಆಯೋಜಿಸಿದವರಿಗೂ, ಭಾಗವಹಿಸಿದ ಮಕ್ಕಳಿಗೂ ದೈವಿಕ ಆನಂದವನ್ನು ನೀಡುವ ಸಂಗತಿ. ಇಲ್ಲಿ ಕಲಿತ ವಿದ್ಯೆ ಮಕ್ಕಳ ಜೀವನದಲ್ಲಿ ಮುಂದಿನ ದಿನಗಳಲ್ಲಿ ಉಪಯೋಗವಾಗಲಿದೆ,” ಎಂದು ಹೇಳಿದರು.








ಸಭಾಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಯುವದ ಅಧ್ಯಕ್ಷರಾದ ಕುಸುಮರಾಜ್ ಅವರು, ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಪ್ರಸಿದ್ಧ ವರ್ಣಚಿತ್ರ ಕಲಾವಿದರಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ವತಿಯಿಂದ ಸುವರ್ಣ ಕನ್ನಡಿಗ ಉಮೇಶ್ ನಾಯಕ್ ಹಾಗೂ ಯುವ ವರ್ಣಚಿತ್ರ ಕಲಾವಿದ ಯುಧಿಷ್ಠಿರ್ ಗೌಡ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ಜೊತೆಗೆ, ರೋಟರಿ ಯುವದ ವತಿಯಿಂದ ರಾಮಕೃಷ್ಣ ಸೇವಾಶ್ರಮಕ್ಕೆ ಐವತ್ತು ಕೆಜಿ ಅಕ್ಕಿಯನ್ನು ದೇಣಿಗೆಯಾಗಿ ನೀಡಲಾಯಿತು.
ಕಾರ್ಯಕ್ರಮದ ಸಂಯೋಜಕರಾದ ಹಾಗೂ ರೋಟರಿ ಯುವದ ನಿಯೋಜಿತ ಅಧ್ಯಕ್ಷೆ ಶ್ರೀಮತಿ ವಚನಾ ಜಯರಾಮ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, “ಈ ಶಿಬಿರದಲ್ಲಿ ಚಿತ್ರಕಲೆ ಬೋಧನೆಯೊಂದಿಗೆ ಪ್ರತಿದಿನವೂ ಮನರಂಜನಾ ಆಟಗಳು, ಮೌಲಿಕ ಮೌಲ್ಯಗಳ ಪರಿಚಯ ಹಾಗೂ ಮಕ್ಕಳಿಗೆ ಸಿಹಿ ತಿಂಡಿಗಳನ್ನು ನೀಡುವ ಮೂಲಕ ಸಂತೋಷವನ್ನು ಉಂಟುಮಾಡುವ ಪ್ರಯತ್ನ ಮಾಡಲಾಗಿದೆ,” ಎಂದು ತಿಳಿಸಿದರು. ಒಂದು ಕಾರ್ಯವನ್ನು ಕೈಗೆತ್ತಿಕೊಂಡರೆ ಅದನ್ನು ಅತ್ಯಂತ ಶುದ್ಧತೆ, ನಿಷ್ಠೆ ಮತ್ತು ಸಮರ್ಪಣಾಭಾವದಿಂದ ಪೂರ್ಣಗೊಳಿಸುವ ಅವರ ಕಾರ್ಯಪದ್ಧತಿ ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಕಾರಣವಾಯಿತು.
ಕಾರ್ಯದರ್ಶಿ ಅಭಿಶ್ ಕೊಳಕ್ಕೆಮಾರ್ ಅವರು ಕಾರ್ಯಕ್ರಮವನ್ನು ಸುಗಮವಾಗಿ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಯುವ ಸಂಸ್ಥೆಯ ಸದಸ್ಯರಾದ ಸುದರ್ಶನ್ ಹಾಗೂ ಲಿಖಿತ ಕುಸುಮರಾಜ್, ಹಾಗೂ ರಾಮಕೃಷ್ಣ ಸೇವಾಶ್ರಮದ ಮೇಲ್ವಿಚಾರಕಿ ತೇಜಶ್ರೀ ಅವರು ಉಪಸ್ಥಿತರಿದ್ದರು.


